ಈದ್ ಮಿಲಾದ್, ಗಣೇಶೋತ್ಸವ: ಭಾವೈಕ್ಯತೆ ಮೆರೆದ ಹಿಂದೂ- ಮುಸ್ಲೀಂ ಮುಖಂಡರು ಮೈಸೂರು,ಸೆಪ್ಟಂಬರ್,16,2024 (..):ನಾಗಮಂಗಲ ಕೋಮು ಗಲಭೆ ಬಳಿಕ ಇದೀಗ ಬಂಟ್ವಾಳದ ಬಿಸಿ ರೋಡ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಈ ಮಧ್ಯೆ ಮೈಸೂರಿನಲ್ಲಿ ಈದ್ ಮಿಲಾದ್, ಗಣೇಶೋತ್ಸವ ಅಂಗವಾಗಿ ಮಕ್ಕಳಿಗೆ ಪುಸ್ತಕ ಹಾಗೂ ಹೋಳಿಗೆ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹಿಂದೂ-ಮುಸ್ಲೀಂ ಬಾಂಧವರು ಬಾವೈಕ್ಯತೆ ಮೆರೆದಿದ್ದಾರೆ. ನಗರದ ಸುಣ್ಣದಕೆರೆ ಯಲ್ಲಿ ಶ್ರೀ ವಿನಾಯಕ ಯುವಕರ ಬಳಗ ವತಿಯಿಂದ ಗಣೇಶ ಪ್ರತಿಷ್ಠಾಪನೆಯಲ್ಲಿ ಮುಸಲ್ಮಾನ್ ಸಮುದಾಯದ ಮುಖಂಡರು ಈದ್ ಮಿಲಾದ್ ಅಂಗವಾಗಿ ಮಕ್ಕಳಿಗೆ ಪುಸ್ತಕ ಹಾಗೂ ಹೋಳಿಗೆ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು ಮಾತನಾಡಿ, ನಮ್ಮ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದು, ಪ್ರತಿ ವರ್ಷವೂ ಸಹ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಸಮೀಪ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು. ಈ ವೇಳೆ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಶ್ರೀ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಮಂಜುನಾಥ್, ಕಿಶೋರ್ ಕುಮಾರ್, ಜಿ ರಾಘವೇಂದ್ರ, ಬ್ಯಾಂಕ್ ಸಿದ್ದರಾಜು, ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷರಾದ ಹಿನಕಲ್ ಉದಯ್, ಕಿರಣ್, ಚಕ್ರಪಾಣಿ, ಕಾಂಗ್ರೆಸ್ ಚಾಮುಂಡೇಶ್ವರಿ ಕ್ಷೇತ್ರದ ಅಲ್ಪಸಂಖ್ಯಾತ ಅಧ್ಯಕ್ಷ ಆರಿಫ್ ಪಾಷಾ, ಗುಲ್ಚನ್ ಪಾಷಾ, ಇರ್ಫಾನ್, ಸೈಯಾದ್, ಇಮ್ರಾನ್ ಪಾಷಾ, ಮಹಮ್ಮದ್, ಶಫಿ ಉಲ್ಲಾ ಖಾನ್, ಹಾಗೂ ಸ್ಥಳೀಯ ಮಕ್ಕಳು ಉಪಸ್ಥಿತರಿದ್ದರು. : , , -,