ಆಪರೇಷನ್ ಕಮಲಕ್ಕೆ ನಾವು ಕೈ ಹಾಕಲ್ಲ ಎಂದ ಶಾಸಕ ಬಿ.ಶ್ರೀರಾಮುಲು ದಾವಣಗೆರೆ:ಜೂ-9:(..) ಹೈಕಮಾಂಡ್ ನಮಗೆ ಆಪರೇಷನ್ ಕಮಲದಿಂದ ದೂರವಿರುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ನಾವು ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಬಿಜೆಪಿ ಶಾಸಕ ಶ್ರೀರಾಮುಲು ತಿಳಿಸಿದ್ದಾರೆ. ದಾವಣಗೆರಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಒಡೆದ ಮನೆ ಇದ್ದಂತೆ. ಒಡೆದ ಮನೆಯಲ್ಲಿ ಯಾವ ರೀತಿ ಸಂಸಾರ ಮಾಡಲು ಆಗುವುದಿಲ್ಲವೋ ಅದೇ ರೀತಿ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಅದರ ಬಗ್ಗೆ ಸಮ್ಮಿಶ್ರ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿಯವರು ಬರ ಪ್ರವಾಸ ಮಾಡುತ್ತಿದ್ದು, ಜನರ ಸಮಸ್ಯೆ ಅಲಿಸುತ್ತಿದ್ದೇವೆ. ಸಮ್ಮಿಶ್ರ ಸರ್ಕಾರದ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿನ ಶಾಸಕರು, ಸಚಿವರು ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಜನರಿಗೆ ಪರಿಹಾರ ಸಿಕ್ಕರೆ ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರುತ್ತದೆ ಎಂದರು.