ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ತಾಯಿ-ಮಗ ಆತ್ಮಹತ್ಯೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್… ಬೆಂಗಳೂರು:ಜೂ-3:(..) ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ತಾಯಿ-ಮಗ ಆತ್ಮಹತ್ಯೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ತನ್ನ ಪತ್ನಿ ಮತ್ತು ಮಗನನ್ನು ಕೊಂದು ನೇಣು ಬಿಗಿದಿರುವ ಬಗ್ಗೆ ಅನುಮಾನ ಆರಂಭವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಗೀತಾಬಾಯಿ ಪತಿ ಸುರೇಶ್, ಬದುಕಿದ್ದ ಮಗನನ್ನೇ ನೇಣಿಗೆ ಹಾಕುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಭಾರೀ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ತಾಯಿ-ಮಗನದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಪೋಲಿಸರಲ್ಲಿ ಮೂಡಿದೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಮೀಟರ್‌ ದಂಧೆಕೋರರಿಂದ ಕಿರುಕುಳ ತಾಳಲಾರದೇ ಬೆಸತ್ತ ಗೀತಾಬಾಯಿ(34), ಮಗ ವರುಣ್ ರಾವ್(12) ಎಂಬ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಸುಧಾ ಎಂಬುವವರ ಕಿರುಕುಳದ ಬಗ್ಗೆ ಗೀತಾಬಾಯಿ ಪತಿ ಸುರೇಶ್ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಬೆನ್ನತ್ತಿದ್ದ ಪೊಲೀಸರಿಗೆ ಈಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನದ ವಾಸನೆ ಆರಂಭವಾಗಿದೆ. ವಿಡಿಯೋದಲ್ಲಿ ಬದುಕಿದ್ದ ಮಗನನ್ನೇ ನೇಣಿಗೆ ಹಾಕುವ ದೃಶ್ಯ ಕಂಡುಬರುತ್ತಿದ್ದು, ಇದರಿಂದ ತಂದೆಯೇ ಮಗನನ್ನು ಕೊಂದು ಹಾಕಿದ್ದಾನೆ ಎನ್ನಲಾಗುತ್ತಿದೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್‌ ಅಹ್ಮದ್‌ರಿಂದ ತನಿಖೆ ಚುರುಕುಗೊಳಿಸಿದ್ದು, ಕೊಲೆ ಅನುಮಾನ ಹಿನ್ನೆಲೆಯಲ್ಲಿ ಪತಿ ಸುರೇಶ್‌ನನ್ನು ಹೆಚ್‌ಎಎಲ್‌ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.