ಕೆಲ ಸಂಸದರಿಗೆ ಟಿಕೆಟ್ ಕೈತಪ್ಪುವ ವಿಚಾರ: ಮಾಜಿ ಸಚಿವ ಎಸ್. ಎ ರಾಮದಾಸ್ ಪ್ರತಿಕ್ರಿಯಿಸಿದ್ದು ಹೀಗೆ..? ಮೈಸೂರು,ಫೆಬ್ರವರಿ,1,2024(..):ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಎಸ್ ಎ ರಾಮದಾಸ್, ಎನ್ ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಟಿಕೆಟ್ ನೀಡುವ ವೇಳೆ ಎಲ್ಲಾ ಅಂಶವನ್ನ ಪಕ್ಷ ಗಮನಿಸುತ್ತದೆ. ಗೆಲುವು ಒಂದೇ ಮಾನದಂಡ. ಮಾಧ್ಯಮಗಳಿಗೆ ಇರುವ ಮಾಹಿತಿ ಪ್ರಕಾರ ನೀವು ಚರ್ಚೆ ಮಾಡುತ್ತೀರಾ ಟಿಕೆಟ್ ನೀಡುವ ಕುರಿತು ಯಾವುದೇ ಸಭೆ ನಡೆದಿಲ್ಲ. ನಮ್ಮ ಬಳಿ ಯಾವುದೇ ಮಾಹಿತಿ ಕೇಳಿಲ್ಲ ಎಂದರು. ಫೆಬ್ರವರಿ 5ರ ಬಳಿಕ ನಾಲ್ಕು ಕ್ಷೇತ್ರಗಳಿಗೂ ತೆರಳುತ್ತೇನೆ. ಕಾರ್ಯಕರ್ತರು, ಮುಖಂಡರು ನೀಡುವ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಿಳಿಸುತ್ತೇವೆ. ಟಿಕೆಟ್ ನೀಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಎಸ್ ಎ ರಾಮದಾಸ್ ತಿಳಿಸಿದರು. ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಂಸದ ಡಿ ಕೆ ಸುರೇಶ್ ಕೂಡಲೇ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು. ಎಐಸಿಸಿ, ಕೆಪಿಸಿಸಿ ದುರ್ಬಲವಾಗಿವೆ. ಹಾಗಾಗಿ ಡಿ. ಕೆ ಸುರೇಶ್ ಈ ರೀತಿಯ ಹೇಳಿಕೆ ‌ನೀಡಿದ್ದಾರೆ. ಇದೇ ಮಾತನ್ನು ರಾಹುಲ್ ಗಾಂಧಿಯವರಿಂದ ಹೇಳಿಸಲಿ. ಎಐಸಿಸಿ, ಕೆಪಿಸಿಸಿ ಕೂಡಲೇ ಸಂಸದ ಡಿ ಕೆ ಸುರೇಶ್ ವಿರುದ್ಧ ಕ್ರಮ ಜರುಗಿಸಬೇಕು. ಒಂದೆಡೆ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತ್ ಜೋಡೋ ಅಂತಾರೆ. ಮತ್ತೊಂದೆಡೆ ಅವರದೇ ಪಕ್ಷದ ಸಂಸದ ಭಾರತ ಇಬ್ಭಾಗದ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಕೂಡ ಚೀನಾಗೆ ಹೋದಾಗ ತಮ್ಮ ಸಂಸ್ಥೆಗೆ ಸಂಬಂಧಿಸಿದ ವಿಚಾರದಲ್ಲಿ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಯಾರಿಗೂ ಗೊತ್ತಾಗದಂತೆ ವಿಮಾನದಿಂದ ಮತ್ತೊಂದು ವಿಮಾನಕ್ಕೆ ರಹಸ್ಯವಾಗಿ ತೆರಳಿ ಒಪ್ಪಂದಗಳಿಗೆ ರಾಹುಲ್ ಗಾಂಧಿ ಸಹಿ ಹಾಕಿದ್ದಾರೆ ಎಂದು ಹೇಳಿದರು. : - – - - - .