ಇಂಡಿಯಾದಲ್ಲಿ ಮಂಡ್ಯ ಏನೆಂಬುದನ್ನ ತೋರಿಸಿದ್ದೀರಿ- ಸುಮಲತಾ ಅಂಬರೀಶ್ ಗೆ ಅಭಿನಂದನೆ ಸಲ್ಲಿಸಿದ ಸುನೀತ ಪುಟ್ಟಣ್ಣಯ್ಯ… ಮಂಡ್ಯ,ಮೇ,29,2019(..): ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸುವ ಮೂಲಕ ಇಡಿ ಇಂಡಿಯಾದಲ್ಲಿ ಮಂಡ್ಯ ಏನು ಎಂಬುದನ್ನ ತೋರಿಸಿದ್ದೀರಿ ಎಂದು ದಿ. ಪುಟ್ಟಣ್ಣಯ್ಯ ಅವರ ಪತ್ನಿ ಸುನೀತ ಪುಟ್ಟಣ್ಣಯ್ಯ ಅವರು ಸಂತಸ ವ್ಯಕ್ತಪಡಿಸಿದರು. ಸುಮಲತಾ ಅಂಬರೀಶ್ ಅವರ ಗೆಲುವಿಗೆ ಕಾರಣರಾದ ಮಂಡ್ ಜನತೆಗೆ ಕೃತಜ್ಞತೆ ಸಲ್ಲಿಸಲು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಂಡು ಸುನೀತ ಪುಟ್ಟಣ್ಣಯ್ಯ ಮಾತನಾಡಿದರು. ಇದೇ ವೇಳೆ ಸುಮಲತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಚುನಾವಣೆ ವೇಳೆ ನಮ್ಮತ್ರ ದುಡ್ಡಿರಲಿಲ್ಲ. ಆಗ ಮಧ್ಯರಾತ್ರಿ ಎರಡು ಜೋಡೆತ್ತುಗಳನ್ನು ಕರೆದುಕೊಂಡು ಬಂದ್ವಿ. ಆ ಜೋಡೆತ್ತುಗಳಿಂದ ನಮ್ಮ ಬಡವರ ಪಕ್ಷಕ್ಕೆ ಸ್ವಾಭಿಮಾನದ ಗೆಲುವು ಸಿಕ್ಕಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸುನೀತ ಪುಟ್ಟಣ್ಣಯ್ಯ ಪರೋಕ್ಷ ಟಾಂಗ್ ಕೊಟ್ಟರು. ಹಾಗೆಯೇ ಮುಂದೆ ಬರುವ ಎಲ್ಲಾ ಸವಾಲುಗಳನ್ನ ಎದುರಿಸಬೇಕಿದೆ. ಈ ನಡುವೆ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಬೇಕು ಎಂದು ಸುನಿತಾ ಪುಟ್ಟಣ್ಣಯ್ಯ ಅವರು ಮನವಿ ಮಾಡಿದರು. ಸಮಾವೇಶದಲ್ಲಿ ಮಾತನಾಡಿದ ಸಚ್ಚಿದಾನಂದ ಅವರು, ಒಬ್ಬ ಹೆಣ್ಣುಮಗಳನ್ನ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಅವರು ಪ್ರಮಾಣವಚನ ಇನ್ನು ಸ್ವೀಕರಿಸಿಲ್ಲ. ಆಗಲೇ ಟೀಕೆ ಟಿಪ್ಪಣಿ ಪ್ರಾರಂಭವಾಗಿದೆ. ಸುಮಲತಾ ಅವರು ಯಾವ ಪಕ್ಷ ಸೇರುತ್ತಾರೆ ಎಂಬುದನ್ನ ಜನಾಭಿಪ್ರಾಯ ಪಡೆದು ನಂತರ ನಿರ್ಧರಿಸುತ್ತಾರೆ ಎಂದು ಹೇಳಿದರು. : ?- # # #