ನೆಹರು ಪ್ರತಿಮೆ ಬಳಿ ಅತೃಪ್ತ ಶಾಸಕ ಮಹೇಶ್ ಕುಮುಟಳ್ಳಿ ಜತೆ ಚರ್ಚಿಸಿದ ಸಿಎಂ ಹೆಚ್.ಡಿಕೆ ಮತ್ತು ಡಿಸಿಎಂ ಪರಮೇಶ್ವರ್…. ಬೆಂಗಳೂರು,ಮೇ,27,2019(..): ಅತೃಪ್ತ ಶಾಸಕರ ಜತೆ ಗುರುತಿಸಿಕೊಂಡಿರುವ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮುಟಳ್ಳಿ ಅವರ ಜತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ. ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಅಖಾಡಕ್ಕಿಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ. ಇಂದು ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಇಬ್ಬರು ಚರ್ಚೆ ನಡೆಸಿದ್ದಾರೆ. ವಿಧಾನಸೌಧದ ಹಿಂಭಾಗದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್, ನೆಹರು ಪ್ರತಿಮೆ ಹಿಂಭಾಗದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಜತೆ ಮಾತನಾಡಿ ಮನವೊಲಿಸಿದ್ದಾರೆ. ಶಾಸಕ ಮಹೇಶ್ ಕುಮುಟಳ್ಳಿ ಹೆಗಲ ಮೇಲೆ ಕೈ ಹಾಕಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಮ್ಮ ಮೇಲೆ ನಿಮಗೇಕೆ ಸಿಟ್ಟು. ನಮ್ಮ ಮೇಲೆ ಕೋಪ ಯಾಕಣ್ಣ. ನಿಮಗೆ ಏನು ಸಹಕಾರ ಬೇಕು ನಾನು ಕೊಡುತ್ತೇನೆ. ಅದನ್ನ ಬಿಟ್ಟು ಈ ರೀತಿ ದೂರವಾಗೋದು ಬೇಡ. ನಿಮ್ಮ ಸಮಸ್ಯೆ ಏನಿದೆ ನಮ್ಮ ಬಳಿ ನೇರವಾಗಿ ಹೇಳಿ. ನಾನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಶಾಸಕ ಮಹೇಶ್ ಕುಮುಟಳ್ಳಿ ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. : # # # #