ಕಾಂಗ್ರೆಸ್ ಹೀನಾಯ ಸೋಲು: ಹಿಂದೆ ಹೇಳಿದ್ದ ಯಡಿಯೂರಪ್ಪ ಹೇಳಿಕೆ ಈಗ ವೈರಲ್; ಬಿಎಸ್ ವೈ ನೀಡಿದ ಪ್ರತಿಕ್ರಿಯೆಯೇನು ಬೆಂಗಳೂರು:ಮೇ-24:(..) ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದು ಹಿನಾಯವಾಗಿ ಸೋಲನುಭವಿಸಿರುವ ಹಿನ್ನಲೆಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಿಂದೆ ನಡೆದ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ವಿಡಿಯೋ ಈಗ ಭಾರೀ ವೈರಲ್ ಆಗಿದ್ದು, ಈ ಕುರಿತು ಯಡಿಯೂರಪ್ಪ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೆ ಕಲಾಪದಲ್ಲಿ ಬಿ ಎಸ್ ಯಡಿಯೂರಪ್ಪ ಅಪ್ಪ ಮಕ್ಕಳು ಸೇರಿ ಕಾಂಗ್ರೆಸ್‌ ಹೆಸರಿಲ್ಲದಂತೆ ಮಾಡ್ತಾರೆ ಎಂದು ಗುಡುಗಿದ್ದರು. ಈಗ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಪಡೆದುಕೊಂಡಿರುವ ಹಿನ್ನಲೆಯಲ್ಲಿ ಈ ಹೇಳಿಕೆ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿರುವ ಯಡಿಯೂರಪ್ಪ, ನಾನು ಸದನದಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 40 ವರ್ಷದ ರಾಜಕಾರಣದ ಅನುಭವದ ಮೇಲೆ ನಾನು ಆ ಮಾತನ್ನು ಹೇಳಿದ್ದೆ. ಸರ್ಕಾರದ ಅಳಿವು ಉಳಿವಿನ ಬಗ್ಗೆ ನಾನು ಈಗ ಏನನ್ನು ಹೇಳುವುದಿಲ್ಲ. ರಾಷ್ಟ್ರೀಯ ನಾಯಕರ ಜತೆ ಸಂಪರ್ಕಿಸಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಮೇ 29ರಂದು ದೆಹಲಿಗೆ ತೆರಳುತ್ತೇನೆ. ರಾಜ್ಯದ ಸಂಸದರೆಲ್ಲ ಅಂದು ದೆಹಲಿಗೆ ತೆರಳುತ್ತಾರೆ. ಎರಡ್ಮೂರು ದಿನ ಕಾಂಗ್ರೆಸ್, ಜೆಡಿಎಸ್ ನಿರ್ಧಾರ ನೋಡುತ್ತೇವೆ. ಅವರ ನಿರ್ಧಾರದ ಮೇಲೆ ರಾಜಕಾರಣ ನಿಂತಿದೆ. ಈಗ ನಾನು ಏನೂ ಹೇಳುವುದಿಲ್ಲ. ಜನರ ತೀರ್ಮಾನದಂತೆ ನಡೆದುಕೊಳ್ಳುತ್ತಾರೆಂಬ ನಂಬಿಕೆಯಿದೆ. ಇನ್ನು ನಾವಾಗಿಯೇ ಸುಮಲತಾ ಅಂಬರೀಷ್​ರನ್ನು ಕರೆಯಲ್ಲ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.