ರಾಜಕೀಯದ ಅಗ್ನಿ ಪರೀಕ್ಷೆ ಎದುರಿಸಿ ಜೀವನ ಸಂಧ್ಯಾಕಾಲದಲ್ಲಿ ಸೋಲುಂಡ ಘಟಾನುಘಟಿಗಳು… ಬೆಂಗಳೂರು, ಮೇ 23, 2019 : ( .. ) ಜೀವನದ ಸಂಧ್ಯಾಕಾಲದಲ್ಲಿದ್ದು ರಾಜಕೀಯದಲ್ಲಿ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಿದ್ದ ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ತುಮಕೂರು ಕ್ಷೇತ್ರದಲ್ಲಿ ಸೋಲಿನ ಕಹಿ ಅನುಭವವಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ, ಕೋಲಾರದಿಂದ ಕಣಕ್ಕಿಳಿದಿದ್ದ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಕಲಬುರ್ಗಿ ಕ್ಷೇತ್ರದದಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ, ಲೋಕಸಭೆಯ ಪ್ರತಿಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ , ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಮತದಾರರು ಈ ಬಾರಿ ಸೋಲಿನ ರುಚಿ ತೋರಿಸಿದ್ದಾರೆ. ಈ ಬಾರಿ ಸೋತಿರುವ ಈ ಹಿರಿಯ ನಾಯಕರುಗಳಿಗೆ ಬಹುತೇಕ ಇದೇ ಕೊನೆಯ ಚುನಾವಣೆ. ಆದರೂ ಮತದಾರರು ಮಾತ್ರ ಕೈ ಹಿಡಿಯಲು ಮನಸ್ಸು ಮಾಡಲಿಲ್ಲ. ಪರಿಣಾಮ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಹಾಸನದ ಸಂಸದರಾಗಿದ್ದ ಮಾಜಿ ಪ್ರಧಾನಿ ದೇವೇಗೌಡ, ಮೊಮ್ಮಗ ಪ್ರಜ್ವಲ್ ಗಾಗಿ ಕ್ಷೇತ್ರ ತ್ಯಾಗ ಮಾಡಿ ತುಮಕೂರಿನಿಂದ ಕಣಕ್ಕಿಳಿದಿದ್ದರು. ಆದರೆ ಅದು ಫಲ ನೀಡಲಿಲ್ಲ. ಮೊಮ್ಮಕ್ಕಳಿಗಾಗಿ ಕಡೆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡ ಸೋಲಿನ ಕಹಿ ಉಣಬೇಕಾಯಿತು. ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ಮಣಿದು ಕಡೆಗಳಿಗೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಕಾಂಗ್ರೆಸ್ನ ಧ್ರುವನಾರಾಯಣ್ ವಿರುದ್ಧ ಸೋಲುಕಂಡಿದ್ದರೆ, ಧ್ರುವನಾರಾಯಣ್ ಹ್ಯಾಟ್ರಿಕೆ ಗೆಲುವು ಸಾಧಿಸಿದ್ದಾರೆ. ಇನ್ನು ಸತತ ಏಳು ಬಾರಿಯಿಂದ ಕೋಲಾರ ಕ್ಷೇತ್ರದಲ್ಲಿ ಗೆಲುವು ಸಾದಿಸಿಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪ, ಈ ಬಾರಿ ಬಿಜೆಪಿ ಅಭ್ಯರ್ಥಿ ವಿ.ಮುನಿಸ್ವಾಮಿ ವಿರುದ್ಧ ಸೋಲು ಕಂಡಿದ್ದರೆ,ಚಿಕ್ಕಬಳ್ಳಾಪುರದಿಂದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪಮೊಯ್ಲಿ ವಿರುದ್ಧ ಬಿಜೆಪಿಯ ಬಚ್ಚೇಗೌಡ ವಿಜಯದ ನಗೆ ಬೀರಿದ್ದಾರೆ. ಈ ಹಿಂದೆ ಎರಡು ಬಾರಿ ಸೋಲುಂಡಿದ್ದ ಬಿ.ಎನ್.ಬಚ್ಚೇಗೌಡ ಈ ಬಾರಿ ಗೆಲುವು ಸಾಧಿಸಿದ್ದಾರೆ. , , , . , , .