ಕಾರಿಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ… ಬೆಂಗಳೂರು: ಮೇ-21:(..) ಇನ್ನೋವಾ ಕಾರಿಗಾಗಿ ಚಾಲಕನೊಬ್ಬನನ್ನು ಸುಟ್ಟು ಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ತುಮಕೂರು ನಿವಾಸಿ ಕೆಂಪೇಗೌಡ (38) ಕೊಲೆಯಾದ ಚಾಲಕ. ಕೆಂಪೇಗೌಡ, ಬೆಂಗಳೂರಿನ ಖಾಸಗಿ ಕಂಪನಿಯೊಂದಲ್ಲಿ ಕಾರನ್ನು ನೋಂದಾಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ವಾರದಲ್ಲಿ ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿ ಕಂಪನಿಗೆ ರಜೆಯಿತ್ತು. ಹಾಗಾಗಿ ಅವರು ಮೇ 17 ರಂದು ಊಟಿಗೆ ಬಾಡಿಗೆಗೆ ಹೊರಟಿದ್ದರು. ಈ ವಿಚಾರವನ್ನು ಕೆಂಪೇಗೌಡ ಪೋನ್​ ಮಾಡಿ ತಮ್ಮ ಮನೆಯವರಿಗೆ ತಿಳಿಸಿದ್ದರು. ಆದರೆ ಎರಡು ದಿನಗಳ ಕಾಲ ಪೋನ್​​​ ಸ್ವಿಚ್​​ ಆಫ್​​​ ಬಂದಿದ್ದನ್ನು ಕಂಡು ಮನೆಯವರು ಹೆಬ್ಬಗೋಡಿ ಪೊಲೀಸ್​​​​​​​​​​​​ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ಕುರಿತು ತನಿಖೆ ಆರಂಭಿಸಿದ ಹೆಬ್ಬಗೋಡಿ ಠಾಣಾ ಪೊಲೀಸರಿಗೆ ನೆಲಮಂಗಲದ ನೀಲಗಿರಿ ತೋಪಿನಲ್ಲಿ ಕೆಂಪೇಗೌಡ ಶವ ಪತ್ತೆಯಾಗಿತ್ತು. ಅದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಲಾದ ಸ್ಥಿತಿಯಲ್ಲಿತ್ತು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಕೆಂಪೇಗೌಡನನ್ನು ಹೊಸ ಕಾರು ಹಾಗೂ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ನೆಲಮಂಗಲ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.