ಶಾಸಕ ಮುನಿರತ್ನ ಮನೆ ಬಳಿ ಅನುಮಾನಸ್ಪದ ಸ್ಫೋಟ: ವ್ಯಕ್ತಿ ಸಾವು ಬೆಂಗಳೂರು:ಮೇ-19: ಶಾಸಕ ಮುನಿರತ್ನ ಅವರ ವೈಯಾಲಿಕಾವಲ್‌ ಮನೆ ಮುಂಭಾಗದ ಕಾರ್‌ ಪಾರ್ಕಿಂಗ್‌ ಬಳಿ ಸ್ಫೋಟ ಸಂಭವಿಸಿದ್ದು, ಶಾಸಕರ ಕೆಲಸದಾಳು ಮೃತಪಟ್ಟ ಘಟನೆ ನಡೆದಿದೆ. ಮುನಿರತ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಮೃತ ವ್ಯಕ್ತಿ. ಸ್ಫೋಟದ ರಭಸಕ್ಕೆ ಮೃತನ ದೇಹ ಛಿದ್ರವಾಗಿದೆ. ಶಾಸಕರ ಮನೆ ಕಿಡಕಿ ಗಾಜುಗಳು ಪುಡಿಪುಡಿಯಾಗಿದೆ. 11ನೇ ಬಿ ಕ್ರಾಸ್ ವೈಯಾಲಿಕಾವಲ್ ಬಳಿ ಇರುವ ಶಾಸಕ ಮುನಿರತ್ನ ನಿವಾಸದಲ್ಲಿ ವೆಂಕಟೇಶ್‌ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಎನ್ನಲಾಗಿದೆ. ಅನುಮಾನಸ್ಪದ ಸ್ಫೋಟದಿಂದ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹಾಗೂ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.