ಸರ್ಕಾರ ವಿಸರ್ಜನೆ ಹೇಳಿಕೆ ವಿಚಾರ: ಬಸವರಾಜ ಹೊರಟ್ಟಿ ವಿರುದ್ದ ಅಸಮಾಧಾನ ಹೊರ ಹಾಕಿದ ಹೆಚ್.ವಿಶ್ವನಾಥ್… ಬೆಂಗಳೂರು, ಮೇ 18,2019(..): ಮೈತ್ರಿ ಪಕ್ಷಗಳ ಗೊಂದಲಗಳಿಗೆ ಸರ್ಕಾರ ವಿಸರ್ಜನೆಯೇ ಪರಿಹಾರ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಗುಡುಗಿದ್ದಾರೆ. ಬಸವರಾಜಹೊರಟ್ಟಿ ಅವರು ನೇರವಾಗಿ ಚುನಾವಣೆ ಎದುರಿಸಿಲ್ಲ. ಅವರಿಗೇನು ಗೊತ್ತು ನಮ್ಮ ಸಂಕಷ್ಟ. ಮತ್ತೆ ಚುನಾವಣೆಗೆ ಹೋಗೋದು ಅಷ್ಟು ಸುಲಭವೇ.. ಈ ಕಾಲದಲ್ಲಿ ಅದು ಸುಲಭವಲ್ಲ ಎಂದು ಹೆಚ್. ವಿಶ್ವನಾಥ್ ಅವರು ಬಸವರಾಜ ಹೊರಟ್ಟಿ ಅವರ ವಿರುದ್ದ ಅಸಮಾಧಾನ ಹೊರಹಾಕಿದರು. ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್, ವಿಧಾನಸಭೆ ಅಥವಾ ಸಮ್ಮಿಶ್ರ ಸರ್ಕಾರ ವಿಸರ್ಜನೆ ಎಂಬುದು ಬಹಳ ದೊಡ್ಡ ಮಾತಾಗುತ್ತದೆ. ಎರಡೂ ಪಕ್ಷಗಳಲ್ಲೂ ಹೈಕಮಾಂಡ್ ಎಂಬುದು ಇದೆ. ಹಿರಿಯ ನಾಯಕರಿದ್ದಾರೆ. ಅವರು ಕುಳಿತು ಚರ್ಚೆ ಮಾಡುತ್ತಾರೆ ಎಂದರು. ಬಸವರಾಜ್ ಹೊರಟ್ಟಿ ಅವರಿಗೆ ಸುಮಾರು 40 ವರ್ಷಗಳ ರಾಜಕೀಯ ಅನುಭವವಿದೆ. ಅವರು ಎಂದೂ ನೇರವಾಗಿ ಚುನಾವಣೆ ಎದುರಿಸಿಲ್ಲ. ಯಾವುದೋ ನೋವಿನಲ್ಲಿ ಅವರು ಸಮ್ಮಿಶ್ರ ಸರ್ಕಾರದ ವಿಸರ್ಜನೆ ಬಗ್ಗೆ ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಎಂದು ವಿಶ್ವನಾಥ್ ತಿಳಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳು ಸಹಜ. ಗೊಂದಲಗಳನ್ನ ಬಗೆಹರಿಸಿಕೊಂಡು ಸರ್ಕಾರ ನಡೆಸಬೇಕು. ನೆಗಡಿ ಬಂದಾಗ ಮೂಗು ಕತ್ತರಿಸಿಕೊಳ್ಳಲು ಆಗುತ್ತಾ..? ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ಎಲ್ಲಾ ಗೊಂದಲಗಳಿಗೆ ಸಿಎಂ ಪರಿಹಾರ ಕಂಡುಕೊಳ್ಳುತ್ತಾರೆ. ಪರಿಹಾರ ಕಂಡುಕೊಂಡು ಸರ್ಕಾರ ನಡೆಸುತ್ತಾರೆ ಎಂದು ಹೇಳಿದರು. : # # # #