ಗಾಂಜಾ ಕಳ್ಳಸಾಗಣೆ, ಮಾರಾಟ: ಕೇರಳ ಮೂಲದ ಮೂವರು ಡ್ರಗ್ ಪೆಡ್ಲರ್ ಗಳ ಬಂಧನ ಬೆಂಗಳೂರು:ಮೇ-16:(..) ಸುಲಭವಾಗಿ ಹಣ ಗಳಿಸುವ ನಿಟ್ಟಿನಲ್ಲಿ ಗಾಂಜಾ ಕಳ್ಳಸಾಗಣೆ ಮತ್ತು ಮಾರಾಟಕ್ಕೆ ಇಳಿದಿದ್ದ ಕೇರಳ ಮೂಲದ ಮೂವರು ಪದವೀಧರ ಯುವಕರನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಎ ಪದವೀಧರ, ಕೇರಳದ ಶ್ಯಾಮ್‌ದಾಸ್‌ (25), ಡಿಪ್ಲೊಮಾ ವ್ಯಾಸಂಗ ಮಾಡಿರುವ ಹರೀಶ್‌ ಕುಮಾರ್‌(24) ಹಾಗೂ ಬಿ.ಟೆಕ್‌ ಅಂತಿಮ ವರ್ಷದಲ್ಲಿರುವ ಜಿಬಿನ್‌ ಜಾನ್‌(21) ಬಂಧಿತರು. ಬಂಧಿತರಿಂದ 4.66 ಲಕ್ಷ ರೂ. ಮೌಲ್ಯದ 23.30 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ನೌಕರಿ ಹುಡುಕಿಕೊಂಡು ಬೆಂಗಳೂರಿಗೆ ಹೋಗುತ್ತೇವೆ ಎಂದು ಪಾಲಕರಿಗೆ ತಿಳಿಸಿ ಕೆಲ ತಿಂಗಳ ಹಿಂದಷ್ಟೇ ಕೆ.ಆರ್‌.ಪುರದ ಅವಲಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಮೂವರೂ ಕೇರಳ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಸುದ್ದಗುಂಟೆ ಪಾಳ್ಯ ವ್ಯಾಪ್ತಿಯಲ್ಲಿ ನಡೆಯಲಿದ್ದ ಪಾರ್ಟಿಯೊಂದಕ್ಕೆ ಗಾಂಜಾ ಪೂರೈಸಲು ಬಂದಿದ್ದಾಗ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲಿಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರ ಮನೆ ಪರಿಶೀಲನೆ ನಡೆಸಿದಾಗ ಭಾರೀ ಪ್ರಮಾಣದ ಗಾಂಜಾ ಸಿಕ್ಕಿದೆ ಎಂದು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 23.3 4.66 .