ಶಾಸಕ ಸ್ಥಾನದಿಂದ ಮುನಿರತ್ನ ವಜಾಗೊಳಿಸಿ : ಕಾಂಗ್ರೆಸ್‌ ವಕ್ತಾರ ಎಚ್.ಎ.ವೆಂಕಟೇಶ್‌ ಆಗ್ರಹ ಮೈಸೂರು, ಸೆ,14,2024: (..) “ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು “ ಎನ್ನುವ ಬಿಜೆಪಿಯ ನಾಯಕರು ಢೋಂಗಿಗಳು ಎನ್ನುವುದು ಮತ್ತೆ ಸಾಬೀತಾಗಿದೆ. ಇವರು ಯಾರಿಗೂ ಮರ್‍ಯಾದೆ ಕೊಡುವುದಿಲ್ಲ, ಇವರಲ್ಲಿ ವ್ಯಕ್ತಿಗೌರವ ಮತ್ತು ಸಮಾನತೆ ಎನ್ನುವುದು ಇಲ್ಲ, ಮಹಿಳೆಯರಿಗಂತೂ ಇವರು ಕಿಂಚಿತ್ತೂ ಮರ್‍ಯಾದೆ ನೀಡುವುದಿಲ್ಲ, ಇವರು ಅಧಿಕಾರದಲ್ಲಿರುವುದೇ ಮತ್ತೊಬ್ಬರನ್ನು ಶೋಷಿಸಲು ಮತ್ತು ಕಮಿಷನ್‌ಹೊಡೆಯಲು ಎನ್ನುವುದನ್ನು ಈ ಪಕ್ಷದ ನಾಯಕ ಮತ್ತು ಶಾಸಕ ಮುನಿರತ್ನ ನಾಯ್ಡು ಮತ್ತೆ ಸಾಬೀತು ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್‌ ಕಿಡಿ ಕಾರಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವೆಂಕಟೇಶ್‌ ಅವರು ಹೇಳಿರುವುದಿಷ್ಟು… ಹೊಲಸು ನಾಲಿಗೆಯ ಮೂಲಕ ದಲಿತರು ಮತ್ತು ಒಕ್ಕಲಿಗ ಸಮುದಾಯದ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿ, ಅಸಹ್ಯ ಅಶ್ಲೀಲ ರೀತಿಯಲ್ಲಿ ಮಹಿಳೆಯರನ್ನು ಬಿಂಬಿಸಿರುವ ಈ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿರಲು ಅನರ್ಹರು. ಸಂಸ್ಕಾರ ಸಂಸ್ಕೃತಿ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಶಾಸಕನ ಅಯೋಗ್ಯತನದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಜಾತಿಯತೆಯ ಗ್ಯಾಂಗ್ರಿನ್‌ನಿಂದ ಪೀಡಿತವಾಗಿರುವ ಮುನಿರತ್ನ ಮೆದುಳನ್ನು ಬಿಜೆಪಿಯ ನಾಯಕರು ಶುಚಿಗೊಳಿಸುವರೇ, ಈ ವ್ಯಕ್ತಿಯನ್ನು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಛಾಟಿಸಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವರೇ ಎನ್ನುವುದು ಈಗಿರುವ ಪ್ರಶ್ನೆ. ಆಯ್ದ ಜಾತಿಗಳ ಕುರಿತು ನಿಂದನಾತ್ಮಕ ಹೇಳಿಕೆ ನೀಡುವುದು, ಶೋಷಿತ ವ್ಯಕ್ತಿಯ ಕುಟುಂಬದ ಹೆಣ್ಣುಮಕ್ಕಳ ಮರ್‍ಯಾದೆಗೆ ಧಕ್ಕೆ ಬರುವ ಮಾತನಾಡುವುದು ತಪ್ಪು ಎನ್ನುವುದು ಶಾಸಕನಾದ ವ್ಯಕ್ತಿಗೆ ಅರಿವಿರಬೇಕು. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಪ್ರಾಥಮಿಕ ಜ್ಞಾನವಿಲ್ಲದ ಮುನಿರತ್ನ ಕುಟುಂಬದ ಕೆಲವರು ಬಹಳ ಹಿಂದಿನಿಂದಲೂ ಸಮಾಜಘಾತುಕ ನಡವಳಿಕೆ ಹೊಂದಿದ್ದರು ಎನ್ನುವುದು ಸಮಾಜಕ್ಕೆ ಈಗಾಗಲೇ ಗೊತ್ತಿದೆ. ಇವರೂ ಸಹ ತಾನು ಇದಕ್ಕೆ ಹೊರತಲ್ಲ ಎನ್ನುವುದನ್ನು ಈಗ ಸಾಬೀತು ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಜೈಲಿಗೆ ಕಳುಹಿಸಬೇಕು, ಅಲ್ಲದೇ ಶಾಸಕ ಸ್ಥಾನದಿಂದ ವಜಾಗೊಳಿಸಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ವಾಪಸುಪಡೆಯವ ತುರ್ತಿದೆ. ಇನ್ನು ಸಂಸ್ಕೃತಿ ಬಗ್ಗೆ ಉದ್ದುದ್ದದ ಭಾಷಣ ಬಿಗಿಯುವ ಬಿಜೆಪಿಯವರು ಜಾತಿ ಕಾರಣದಿಂದ ತಮ್ಮ ಪಕ್ಷದ ನಾಯಕ ಇತರ ವ್ಯಕ್ತಿಗಳನ್ನು ಹೇಗೆ ನಡೆಸಿಕೊಂಡಿದ್ದಾನೆ ಎನ್ನುವುದನ್ನು ಅರಿತು ಕ್ರಮ ಕೂಡಲೇ ವಹಿಸಬೇಕು. ಇಲ್ಲದಿದ್ದರೆ ಸಂಸ್ಕೃತಿ, ಧರ್ಮದ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇರುವುದಿಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ತಮ್ಮ ಶಾಸಕನ ಮಾನಸಿಕ ದಾರಿದ್ರ್ಯತೆ, ಜಾತಿಗ್ರಸ್ತ ಮನಸ್ಥಿತಿಗಾಗಿ ಬಹಿರಂಗವಾಗಿ ಸಮಾಜದ ಕ್ಷಮೆ ಕೋರಬೇಕಿದೆ ಎಂದು ಎಚ್.ಎ. ವೆಂಕಟೇಶ್ ಒತ್ತಾಯಿಸಿದ್ದಾರೆ. : , , , .. , .