ಇಂದು ಮೂಡಾ ಸಭೆ: ನಂಜನಗೂಡು ಮತ್ತು ಶ್ರೀರಂಗಪಟ್ಟಣ ವಿಷಯ ಪ್ರಸ್ತಾಪಿಸದಂತೆ ಚುನಾವಣಾ ಆಯೋಗ ತಾಕೀತು…. ಮೈಸೂರು,ಮೇ,10,2019(..): ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು ಹೀಗಾಗಿ ಇಂದು ನಡೆಯುವ ಮೂಡಾ ಸಭೆಯಲ್ಲಿ ನಂಜನಗೂಡು ಮತ್ತು ಶ್ರೀರಂಗಪಟ್ಟಣದ ವಿಷಯ ಪ್ರಸ್ತಾಪಿಸದಂತೆ ರಾಜ್ಯ ಚುನಾವಣಾ ಆಯೋಗ ತಾಕೀತು ಮಾಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂದು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆ ನಡೆಸಬಹುದೇ ಎಂದು ಸ್ಪಷ್ಟನೆ ಕೋರಿ ಮುಡಾ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಈ ಸಂಬಂಧ ಸಭೆ ನಡೆಸುವ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವ ಪ್ರದೇಶಗಳಿಗೆ ಸೀಮಿತಗೊಳಿಸಿ ನೀತಿ ಸಂಹಿತೆ ಜಾರಿ ಮಾಡಲಾಗಿದೆ. 2-5-2019ರಿಂದ 31-5-2019ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಸದರಿ ಪ್ರಾಧಿಕಾರದ ಸಿಡಿಪಿ ವ್ಯಾಪ್ತಿಯಲ್ಲಿ ನಂಜನಗೂಡು ಮತ್ತು ಶ್ರೀರಂಗಪಟ್ಟಣ ಬರುತ್ತದೆ. ಹೀಗಾಗಿ ನಂಜನಗೂಡು ಮತ್ತು ಶ್ರೀರಂಗಪಟ್ಟಣ ಕುರಿತು ಸಭೆಯಲ್ಲಿ ಚರ್ಚಿಸದೆ, ಯಾವುದೇ ನಿರ್ಣಯ ಕೈಗೊಳ್ಳದೆ ಸಭೆ ನಡೆಸಬಹುದು ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಮೂಡಾ ಸಭೆ ನಡೆಯಲಿದೆ. : -- - –- -