ಕೇಂದ್ರ ಲೋಕೋಪಯೋಗಿಗೆ ರಾಜ್ಯದ ಕಾಮಗಾರಿಯಲ್ಲಿ ಅವಕಾಶ ಹಾಗೂ ಮೆಟ್ರೋ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ ಗೆ ನೀಡಿ : ಸಿಎಂಗೆ ಪ್ರತ್ಯೇಕ ಮನವಿ ಬೆಂಗಳೂರು, ಮೇ 08, 2019 (.. ): ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಕೈಗೊಳ್ಳುವ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು ತಮಗೂ ಅವಕಾಶ ಕೊಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಯ ನಿರ್ದೇಶಕರಾದ ಪ್ರಭಾಕರ್ ಸಿಂಗ್, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದರು . ಕೇಂದ್ರ ಲೋಕೋಪಯೋಗಿ ಇಲಾಖೆಯಲ್ಲಿ ತಾಂತ್ರಿಕ ಪರಿಣಿತಿ ಹೊಂದಿರುವ ತಜ್ಞರಿದ್ದು, ಅವರ ಸೇವೆಯನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಯೋಜನೆಗಳಲ್ಲಿ ಕಾಮಗಾರಿ ನಿರ್ವಹಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಉತ್ಸುಕವಾಗಿದೆ ಎಂದು ಅವರು ತಿಳಿಸಿದರು.ರಾಜ್ಯ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತಕ್ಷಣವೇ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಭೆಯಲ್ಲಿ ಹಾಜರಿದ್ದ ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮೆಟ್ರೋ ಕೋಚ್ ಬಿ.ಇ.ಎಂ.ಎಲ್ ಗೆ : ಬೆಂಗಳೂರು ಎರಡನೇ ಹಂತದ ಮೆಟ್ರೋ ಯೋಜನೆಯ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ ಸಂಸ್ಥೆಗೆ ವಹಿಸಬೇಕೆಂದು ಬಿ.ಇ.ಎಂ.ಎಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಕುಮಾರ್ ಹೂಟ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಇಂದು ಭೇಟಿ ಮಾಡಿ ಮನವಿ ಮಾಡಿದರು. ಮಹಾರಾಷ್ಟ್ರ ಮೆಟ್ರೋ ರೈಲು ಕಾರ್ಪೋರೇಷನ್ ನಲ್ಲಿ ಶೇ 70 ರಷ್ಟು ಕೋಚ್ಗಳನ್ನು ನಿರ್ಮಿಸಲು ಬಿ.ಇ.ಎಂ.ಎಲ್ಗೆ ವಹಿಸಿದೆ. ಬಿ.ಇ.ಎಂ.ಎಲ್ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕೋಚ್ ನಿರ್ಮಾಣ ಕಾರ್ಯವನ್ನು ವಹಿಸಿದಲ್ಲಿ ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತದೆ. ಈ ನಿಟ್ಟಿನಲ್ಲಿ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ಗೆ ವಹಿಸುವಂತೆ ಅವರು ಮನವಿ ಮಾಡಿದರು.ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿ.ಇ.ಎಂ.ಎಲ್ ಅಧ್ಯಕ್ಷರಾದ ಅಜಯ್ ಸೇಠ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದರು. – ..