ಮಂಡ್ಯದಲ್ಲಿ ನಿಖಿಲ್ ಸೋತರೆ ಸಚಿವ ಪುಟ್ಟರಾಜು ತಲೆ ತಂಡ ಸಾಧ್ಯತೆ?! ಬೆಂಗಳೂರು, ಮೇ 08, 2019 (..): ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ಪುನರ್​ ರಚನೆಯಾಗಲಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೆ ಸಚಿವ ಪುಟ್ಟರಾಜು ತಲೆದಂಡವಾಗುವುದು ಖಚಿತವಾಗಿದೆ. ಜೆಡಿಎಸ್​ ಹಾಗೂ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು. ತಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗಾಗಿ ಇನ್ನಿಲ್ಲದಂತೆ ಶ್ರಮಿಸಿದ್ದರು. ಮಂಡ್ಯದಲ್ಲಿ ಏಳು ಶಾಸಕರಿದ್ದರೂ ಸಹ ಮಂಡ್ಯದಲ್ಲಿ ನಿಖಿಲ್ ಗೆಲುವು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದ ಇಬ್ಬರು ಸಚಿವರ ಪೈಕಿ ಒಬ್ಬರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ತಮ್ಮದೇ ಆದ ಸಮೀಕ್ಷೆ ನಡೆಸಿದ್ದು. ಅದರಲ್ಲಿ ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರದಿಂದ ನಿಖಿಲ್ ಎಷ್ಟು ಮತಗಳ ಲೀಡ್​ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯ ಪ್ರಕಾರ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪ್ರತಿನಿಧಿಸುವ ಮದ್ದೂರು ಹಾಗೂ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಪ್ರತಿನಿಧಿಸುವ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್​ ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.