ಕಬಿನಿ ಹಿನ್ನೀರಿನಲ್ಲಿ ‘ಗಜ’ ರಿಲ್ಯಾಕ್ಸ್: ನಾಗರಹೊಳೆಯಲ್ಲಿ ಸಾರಥಿ ರೌಂಡ್ಸ್ ಮೈಸೂರು:ಮೇ-5:(..) ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಪರವಾಗಿ ಅಬ್ಬರದ ಪ್ರಚಾರದ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಲ್ಯಾಕ್ಸ್ ಮೂಡಿಗಾಗಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ. ತಿಂಗಳು ಕಾಲ ಮಂಡ್ಯದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರ ಪ್ರಚಾರ ನಡೆಸಿ, ಚುನಾವಣೆ ಮುಗಿದ ನಂತರ ಸಿನೆಮಾ ಶೂಟಿಂಗ್ ತೆರಳಿದ್ದ ದರ್ಶನ್, ಮತ್ತೆ ಮೈಸೂರಿಗೆ ವಾಪಸ್ಸಾಗಿ ತಮ್ಮ ಪ್ರಿಯವಾದ ಕಾಡಿನ ಲೋಕಕ್ಕೆ ಜಾರಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆಯಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಹಾಗೂ ಕಬಿನಿ ಹಿನ್ನೀರಿನ ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಿರುವ ದರ್ಶನ್, ಕೈ ನೋವಿನಲ್ಲಿ ತಮ್ಮ ಛಾಯಾಚಿತ್ರ ತೆಗೆಯಲು ಬಿಡುವು ನೀಡಿಲ್ಲ. ಕಬಿನಿ ಫಾರೆಸ್ಟ್ ನಲ್ಲಿ ಪ್ರಕೃತಿ ಮಡಿಲಲ್ಲಿ ವಿಶ್ರಾಂತಿ ಪಡೆದು, ಆಪ್ತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಿರುಗಾಡಿ ಅದ್ಭುತ ಫೋಟೋ ಸೆರೆಹಿಡಿಯುತ್ತಿದ್ದಾರೆ. ಕಳೆದ ತಿಂಗಳು ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ದರ್ಶನ್ ಕಾಡಿನಲ್ಲಿ ತೆಗೆದ ಛಾಯಾಚಿತ್ರಗಳನ್ನು ಪ್ರದರ್ಶನಕಿಟ್ಟು, ಅದರಲ್ಲಿ ಬಂದ ಹಣವನ್ನು ಸಮಾಜದ ಕಾರ್ಯಕ್ಕೆ ಬಳಸಿದ್ದನ್ನು ಸ್ಮರಿಸಬಹುದು.