ಕೆಐಎ ನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: 4 ಕೆ.ಜಿ ಬಂಗಾರ ಜಪ್ತಿ ಬೆಂಗಳೂರು:ಮೇ-4:(..) ಕೆಂಪೇಗೌಡ ಅಂತರಾಷ್ತ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಇರುವ ಸೀಮಾ ಸುಂಕ ಅಧಿಕಾರಿಗಳು ಬರೋಬ್ಬರಿ 4 ಕೆ.ಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಎಮಿರೇಟ್ಸ್‌ ವಿಮಾನದಲ್ಲಿ ದುಬೈನಿಂದ ಕೆಐಎಗೆ ಬಂದಿದ್ದ ಪ್ರಯಾಣಿಕನ ಚೆಕ್‌ ಇನ್‌ ಲಗೇಜ್‌ ತಪಾಸಣೆ ವೇಳೆ ಕಬ್ಬಿಣದ ಉಪಕರಣವೊಂದರಲ್ಲಿ ಬಚ್ಚಿಡಲಾಗಿದ್ದ 1.19 ಕೋಟಿ ರೂ. ಮೌಲ್ಯದ 3.67 ಕೆ.ಜಿ ಚಿನ್ನದ ಬಿಸ್ಕತ್ತುಗಳನ್ನು ಜಪ್ತಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ. ಚಿನ್ನದ ಬಿಸ್ಕತ್‌ ಮೇಲೆ ಲೋಹ ಕರಗಿಸಿ ಸುರಿದು ಚಿನ್ನ ಎನ್ನುವ ಅನುಮಾನವೇ ಬಾರದಂತೆ ಮಾಡಿ ಅದನ್ನು ಕಬ್ಬಿಣದ ಉಪಕರಣದ ಒಳಗೆ ಗೌಪ್ಯವಾಗಿ ಇರಿಸಲಾಗಿತ್ತು. ನಿಖರ ಮಾಹಿತಿ ಆಧರಿಸಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಚಿನ್ನದ ಬಿಸ್ಕತ್ತುಗಳನ್ನು ಹೊರ ತೆಗೆದಿದ್ದಾರೆ. ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಒಮಾನ್‌ ರಾಜಧಾನಿ ಮಸ್ಕತ್‌ನಿಂದ ಹೈದರಾಬಾದ್‌ ಮಾರ್ಗವಾಗಿ ಕೆಐಎಗೆ ಬಂದಿದ್ದ ಪ್ರಯಾಣಿಕನೊಬ್ಬನ ಟ್ರಾಲಿ ಬ್ಯಾಗ್‌ ಪಟ್ಟಿಯಲ್ಲಿ ಬಚ್ಚಿಡಲಾಗಿದ್ದ 359 ಗ್ರಾಂ ಚಿನ್ನ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.