‘ಕೈ’ ಸರ್ಕಾರದ ಯುವನಿಧಿ ಯೋಜನೆಗೆ ಮೆಚ್ಚುಗೆ: ಲೋಕಸಭೆ ಸ್ಪರ್ಧೆ ಬಗ್ಗೆ ಹೆಚ್.ಡಿ ದೇವೇಗೌಡರಿಂದ ಸ್ಪಷ್ಟನೆ. ಬೆಂಗಳೂರು, ಜನವರಿ,13,2024(..):ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ನಿನ್ನೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಈ ಯೋಜನೆಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್.ಡಿ ದೇವೇಗೌಡರು, ಸಿದ್ದರಾಮಯ್ಯ ಯುವನಿಧಿ ಕಾರ್ಯಕ್ರಮ ತಂದಿದ್ದಾರೆ. ಕಾರ್ಯಕ್ರಮ ಒಳ್ಳೆಯದು ನಾನು ಅದನ್ನ ಅಭಿನಂದಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದೆ. ನನಗೆ 91 ವರ್ಷ ವಯಸ್ಸಾಗಿದೆ. ಜ್ಞಾಪಕ ಶಕ್ತಿ ಇದೆ, ಓಡಾಡಲು ಕಷ್ಟವಾಗುತ್ತದೆ. ಆದರೂ‌ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ. ಸಿಎಂ ಸಿದ್ದರಾಮಯ್ಯ ಅವರು ಆಯೋಧ್ಯೆಗೆ ಜನವರಿ 22ರಂದು ಹೋಗುವುದಿಲ್ಲ ನಂತರ ಹೋಗುತ್ತೇನೆಂದು ಹೇಳಿದ್ದಾರೆ. ಅವರ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಮುಜರಾಯಿ ಇಲಾಖೆ ದೇವಾಲಯದಲ್ಲಿ ಪೂಜೆಗೆ ಸೂಚಿಸಿದೆ. ಸಾಫ್ಟ್ ಹಿಂದುತ್ವವೋ, ಹಾರ್ಡ್ ಹಿಂದುತ್ವವೋ ಒಟ್ಟಿನಲ್ಲಿ ಸಿದ್ದರಾಮಯ್ಯ ರಾಮನ ದರ್ಶನ ಮಾಡಿಕೊಂಡು ಬರಲಿ. ಶ್ರೀರಾಮನ ಆಶೀರ್ವಾದ ಪಡೆದುಕೊಳ್ಳಲಿ ಎಂದು ಹೆಚ್.ಡಿಡಿ ತಿಳಿಸಿದರು. : - --