ಸಂಸದ ಪ್ರತಾಪ್ ಸಿಂಹ ಸಹೋದರ ವಿರುದ್ದ ಪ್ರಕರಣ: ಸಿದ್ದರಾಮಯ್ಯರಿಂದ ಅಧಿಕಾರ ದುರ್ಬಳಕೆ- ಮಾಜಿ ಸಿಎಂ ಹೆಚ್.ಡಿಕೆ ಆರೋಪ. ಬೆಂಗಳೂರು, ಜನವರಿ 5,2024(..):ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ವಿರುದ್ದ ಮರಗಳ್ಳತನ ಆರೋಪದ ಮೇಲೆ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ , ಅಧಿಕಾರ ದುರ್ಬಳಕೆ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರತಾಪಸಿಂಹ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಈ ರೀತಿ ಮಾಡಿದ್ದಾರೆ. ಹಾಸನದ ಗೆಂಡೆಕಟ್ಟೆ ಅರಣ್ಯದಿಂದ ಬೀಟೆ ಮರ ಕಡಿದು ಬೇಲೂರಿನಲ್ಲಿರುವ ಪ್ರತಾಪ್ ಸಿಂಹ ಸಹೋದರನ ಗುತ್ತಿಗೆ ಪಡೆದ ಜಮೀನಿನಲ್ಲಿ ಹಾಕಿಸಲು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ತೇಜೋವಧೆ ಮಾಡಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪ್ರತಾಪ್ ಸಿಂಹ ಸಹೋದರನಿಗೂ ಮರಕಡಿದ ವಿಚಾರಕ್ಕೂ ಸಂಬಂಧವಿಲ್ಲ. ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕಾಲ್​​ ಡೀಟೆಲ್ಸ್ ತೆಗೆಸಿದ್ರೆ ಎಲ್ಲವೂ ಗೊತ್ತಾಗುತ್ತೆ ಎಂದರು. ಕರಸೇವಕರ ಬಂಧನ ವಿಚಾರ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರೈತರು ಮತ್ತಿತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಅದರ ಬದಲಿಗೆ ಇಂತಹ ವಿಚಾರವನ್ನ ಮುನ್ನೆಲೆಗೆ ತಂದಿದೆ. ಸರ್ಕಾರ ವೈಫಲ್ಯಗಳನ್ನ ಮರೆ ಮಾಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. : - - -- - ..