ಐಎಎಸ್‌ ಅಧಿಕಾರಿ ಸಿ.ಶಿಖಾ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ವಿಚಾರಣೆ ಜ. ೯ ಕ್ಕೆ. ಮೈಸೂರು, ಜ.೦೩, ೨೦೨೪ : (̤ ) : ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ. ಶಿಖಾ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ಮರೀಗೌಡ ಪ್ರಕರಣದ ವಿಚಾರಣೆ ಜ.೯ ಕ್ಕೆ ಮುಂದೂಡಿದೆ. ಐಎಎಸ್‌ ಅಧಿಕಾರಿ ಸಿ.ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದ ದೂರರ್ಜಿಯಿಂದ ಬಿಡುಗಡೆ ಕೋರಿ ಕಾಂಗ್ರೆಸ್‌ ಮುಖಂಡ ಕೆ.ಮರೀಗೌಡ, ಸಿಆರ್‌ ಪಿಸಿ ೨೩೯ ಅಡಿಯಲ್ಲಿ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಕೆ.ಮರೀಗೌಡ ಪರ ವಕೀಲರು ಜ.೨ ರಂದು ಮೈಸೂರಿನ ೩ ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ಪರ ವಕೀಲರ ವಾದ ಆಲಿಸಿದರು. ಬಳಿಕ ವಿಶೇಷ ಸರಕಾರಿ ಅಭಿಯೋಜಕರ ವಾದಕ್ಕಾಗಿ ವಿಚಾರಣೆಯನ್ನು ಜ.೯ ಕ್ಕೆ ಮುಂದೂಡಿದರು. ಏನಿದು ಘಟನೆ : ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರನ್ನು ಕಾಂಗ್ರೆಸ್ ಮುಖಂಡ ಮರೀಗೌಡ ಸಾರ್ವಜನಿಕವಾಗಿ ನಿಂದಿಸಿದ್ದ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದ ಸಿಡಿ ಮತ್ತಿತರ ದಾಖಲೆಗಳನ್ನು ಹಾಜರಿಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಖಾ ಅವರು ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ 2016ರ ಜುಲೈ 3ರಂದು ಮರೀಗೌಡ ಅವರ ಬೆಂಬಲಿಗ ಮಂಜುನಾಥ್ ಸೇರಿದಂತೆ ಕೆಲವರು ನಗರದ ಸರ್ಕಾರಿ ಅತಿಥಿ ಗೃಹದ ಬಳಿ ಶಿಖಾ ಅವರನ್ನು ಕರ್ತವ್ಯದ ವೇಳೆ ಅಡ್ಡಿ ಪಡಿಸಿದ್ದರು ಎನ್ನಲಾಗಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರ ನಿಮಿತ್ತ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ್ದರು. ಈ ವೇಳೆ ಮರಿಗೌಡ ಮತ್ತು ಅವರ ಬೆಂಬಲಿಗರು ಕೂಡ ಅತಿಥಿಗೃಹ ಪ್ರವೇಶಿಸಲು ಪ್ರಯತ್ನಿಸಿದ್ದ ಸಂದರ್ಭ ಕರ್ತವ್ಯದಲ್ಲಿದ್ದ ಶಿಖಾ ಮರೀಗೌಡರನ್ನು ತಡೆದಿದ್ದಾರೆ. ನಂತರ ಮರೀಗೌಡ ಮತ್ತಿತರರು ಮುನ್ನುಗ್ಗಲು ಯತ್ನಿಸಿದ್ದಲ್ಲದೆ ಶಿಖಾ ಅವರನ್ನು ಏಕವಚನದಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ. ಈ ಘಟನೆಯ ಹಿನ್ನೆಲೆ ಶಿಖಾ ಅವರು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮರೀಗೌಡ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದರು. ದೇವರಾಜ ವಿಭಾಗದ ಎಸಿಪಿ ರಾಜಶೇಖರ್ ಅವರ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಮರಿಗೌಡ ಸೇರಿದಂತೆ ಮತ್ತೆ ಮೂವರ ವಿರುದ್ಧ 45 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಮರೀಗೌಡ, 2016ರ ಆಗಸ್ಟ್ 3ರಂದು ನಜರ್ ಬಾದ್ ಪೊಲೀಸರಿಗೆ ಶರಣಾಗಿದ್ದರು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಹಾಗಾಗಿ 22 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಯಲ್ಲಿದ್ದರು. ನಂತರ ಅವರಿಗೆ ಜಾಮೀನು ಲಭಿಸಿತ್ತು. : - – - - : 9. 239 .