ಹಲ್ಲೆಯಾಗುತ್ತಿರುವಾಗ ಮೂಕಪ್ರೇಕ್ಷಕರಾಗಿದ್ದ ಜನರ ಬಳಿ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡಿ- ಹೈಕೋರ್ಟ್ ಬೆಂಗಳೂರು,ಡಿಸೆಂಬರ್,18,2023(..):ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಯಾಗುತ್ತಿರುವಾಗ ಮೂಕಪ್ರೇಕ್ಷಕರಾಗಿದ್ದ ಜನರ ಬಳಿ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡಿ ಎಂದು ಹೈಕೋರ್ಟ್ ಸಲಹೆ ನೀಡಿದೆ. ಘಟನೆ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಸಂತ್ರಸ್ತೆ ಮೇಲೆ ಹಲ್ಲೆಯಾಗುತ್ತಿದ್ದರೂ ಸುಮ್ಮನೇ ನಿಂತ ಜನರ ವರ್ತನೆ ಖಂಡಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಮೂಕಪ್ರೇಕ್ಷಕರಾದ ಗ್ರಾಮದ ಜನರಿಂದ ದಂಡ‌ಸಂಗ್ರಹಿಸಿ ಸಂತ್ರಸ್ತೆಗೆ ನೀಡಿ. ಇಂತಹ ವರ್ತನೆಗೆ ಬ್ರಿಟಿಷರು ಪುಂಡಕಂದಾಯ ಎಂಬ ತೆರಿಗೆ ವಿಧಿಸುತ್ತಿದ್ದರು. ವಿಲಿಯಮ್ ಬೆಂಟಿಂಕ್ ಕಾಲದಲ್ಲೇ ಇಂತಹ ನೀತಿ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿಂದೆ ವಿಚಾರಣೆ ನಡೆಸಿದ ವೇಳೆ ಮಹಾಭಾರತದಲ್ಲಿ ವಸ್ತ್ರಾಪಹರಣದ ವೇಳೆ ದ್ರೌಪದಿಯ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ ಧಾವಿಸಿದಂತೆ, ಈಗಿನ ಕಾಲದಲ್ಲಿ ಯಾರು ಕೂಡ ಬರುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. : – – – – –