ರೈತ ಕುಟುಂಬಕ್ಕೆ ಮೀಸಲಾತಿ, ಮದುವೆಯಾಗುವ ವಧುವಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿ- ಬಡಗಲಪುರ ನಾಗೇಂದ್ರ ಮೈಸೂರು,ಡಿಸೆಂಬರ್,5,2023(..):ಯುವರೈತರನ್ನ ಮದುವೆಯಾಗಲು ಹುಡುಗಿಯರು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ರೈತ ಕುಟುಂಬಕ್ಕೆ ಮೀಸಲಾತಿ, ಯುವರೈತರನ್ನ ಮದುವೆಯಾಗುವ ವಧುವಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಸರ್ಕಾರಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ, ಯುವ ರೈತರಿಗೆ ಹೆಣ್ಣು ಸಿಕ್ಕುತ್ತಿಲ್ಲ ಎಂದು ಹೆಣ್ಣಿಗಾಗಿ ಆಂದೋಲನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಒಂದು ಯುವ ರೈತ ಶಕ್ತಿಗೆ ಬಲ ತುಂಬಲು ಕೆಲಸ ಮಾಡಬೇಕಿದೆ. 35 ವರ್ಷದ ಒಳಗೆ ಇರುವವನ್ನ ಸೇರಿಸಿಕೊಂಡು ಒಂದು ರಚನಾತ್ಮಕ ಕ್ರಿಯೆಯಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಯುವ ಘಟಕ ರಚಿಸಿದ್ದೇವೆ. ರೈತರ ಮಕ್ಕಳಿಗೆ ಹೆಣ್ಣು ಸಿಗೋದು ಕಷ್ಟ. ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ. ರೈತ ಯುವಕರಿಗೆ ಹೆಣ್ಣು ಸಿಕ್ತಾ ಇಲ್ಲ ಎಂದು ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೃಷಿ ಒಂದು ಲಾಭದಾಯಕ ಹುದ್ದೆ ಅಲ್ಲ ಎಂಬ ಅಭಿಪ್ರಾಯ ಬಂದಿದೆ. ಕೃಷಿಕನ‌ ಮಗಳು ಇನ್ನೊಬ್ಬ ಕೃಷಿಕನ ಮಗನ ಮದುವೆಯಾಗಲು ಒಪ್ಪುತ್ತಿಲ್ಲ. ಇಂತಹ ಯುವ ರೈತರ ಸಂಘಟಿಸಿ ಅವರಿಗೆ ಸರ್ಕಾರವೇ ಕೆಲವು ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ರೈತ ಕುಟುಂಬದ ವರನನ್ನು ಮದುವೆಯಾದರೆ ವಧುವಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕು. ಸರ್ಕಾರ ಹಾಗೂ ಸರ್ಕಾರೇತರ ಕಚೇರಿಗಳಲ್ಲಿ ರೈತ ಕುಟುಂಬಕ್ಕೆ ಮೀಸಲಾತಿ ಜಾರಿಗೆ ತರಬೇಕು. ಸರ್ಕಾರ ಹೆಣ್ಣು ಮಕ್ಕಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ವಧುವರರ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸಬೇಕು. ಕೃಷಿಯಲ್ಲಿ ಸಾಧನೆ ಮಾಡಿರುವ ಹೆಣ್ಣು ಮಕ್ಕಳನ್ನ ಗೌರವಿಸಿ, ಸನ್ಮಾನಿಸಿ ಪ್ರೋತ್ಸಾಹ ನೀಡಬೇಕು. ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ಕೃಷಿಯ ಕಡೆ ಒಲವು ಮೂಡಿಸಲು ಉತ್ತೇಜಕ ನೀಡಬೇಕು. ಈ‌ ನಿಟ್ಟಿನಲ್ಲಿ ಒಂದು ಬೃಹತ್ ಸಮಾವೇಶವನ್ನೂ ಮಾಡಲು ಚಿಂತನೆ ಮಾಡಲಾಗಿದೆ. ಮುಂದಿನ‌ ವರ್ಷ ಮಾರ್ಚ್ ತಿಂಗಳಲ್ಲಿ ಒಂದು ಸಮಾವೇಶ ಮಾಡುವ ಚಿಂತನೆ ಇದೆ. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇವತ್ತಿನ ದಿನಗಳಲ್ಲೂ ಇದೆ. ಆ ದೃಷ್ಟಿಯಿಂದಲೂ ಹಳ್ಳಿಗಾಡಿಗೆ ಮದುವೆಯಾಗಲು ಹೆಣ್ಣುಮಕ್ಕಳು ಹಿಂಜರಿಯುತ್ತಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಜಾತಿ, ಮೌಢ್ಯಗಳನ್ನ ಗಟ್ಟಿಗೊಳಿಸುವ ಕೆಲಸವನ್ನು ಇಂದಿನ ಸರ್ಕಾರಗಳೇ ಮಾಡುತ್ತಿವೆ. ರೈತ ಸಂಘದ ಮೇಲೆ ಸಾಮಾಜಿಕ ದೊಡ್ಡ ಜವಾಬ್ದಾರಿ ಇದೆ. ಈ ಸಾಮಾಜಿಕ ಪಿಡುಗು ಹೋಗಲಾಡಿಸಬೇಕು ಎಂದು ಬಡಗಲಪುರ ನಾಗೇಂದ್ರ ಹೇಳಿದರು. : – - 5 – -- -