ಎಂಇಎಸ್ ಗೆ ಶಾಕ್: ಬೆಳಗಾವಿ ಗಡಿ ಪ್ರವೇಶಿಸದಂತೆ ಮಹಾರಾಷ್ಟ್ರದ 3 ಸಚಿವರು, ಓರ್ವ ಎಂಪಿಗೆ ನಿರ್ಬಂಧ. ಬೆಳಗಾವಿ,ಅಕ್ಟೋಬರ್,31,2023(..):ನಾಳೆ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮವಾಗಿದ್ದು, ಮೈಸೂರು ರಾಜ್ಯ ಕರ್ನಾಟಕವೆಂದು ಮರುನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆ ಈ ಬಾರಿ ಅದ‍್ಧೂರಿಯಾಗಿ ಆಚರಣೆಗೆ ಸರ್ಕಾರ ಮುಂದಾಗಿದೆ. ಈ ಮಧ್ಯೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ) ದಿನದಂದು ಕರಾಳ ದಿನಾಚರಣೆಗೆ ನಿರ್ಧರಿಸಿದ್ಧ ಎಂಇಎಸ್​ಗೆ ಬೆಳಗಾವಿ ಜಿಲ್ಲಾಡಳಿ​ತ ಶಾಕ್ ನೀಡಿದೆ.​ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಆಚರಿಸುವ ಸಾಧ್ಯತೆ ಇರುವ ಹಿನ್ನೆಲೆ, ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಒಬ್ಬ ಸಂಸದರಿಗೆ ಅ.31ರಿಂದ ನ.2ರ ಸಂಜೆವರೆಗೆ ಬೆಳಗಾವಿ ನಗರ ಹಾಗೂ ಜಿಲ್ಲೆಯ ಗಡಿಪ್ರವೇಶಿಸದಂತೆ ನಿಷೇಧಿಸಲಾಗಿದೆ. ಬೆಳಗಾವಿ ಗಡಿ ಪ್ರವೇಶಿಸದಂತೆ ಮಹಾರಾಷ್ಟ್ರದ ಸಚಿವರಾದ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ್‌ ಕೇಸರಕರ್‌ ಮತ್ತು ಸಂಸದ ಧೈರ್ಯಶೀಲ ಮಾನೆ ಅವರಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ. ನಿಷೇಧಾಜ್ಞೆಗೆ ಒಳಗಾಗಿರುವ ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಸಂಸದರು ರಾಜ್ಯೋತ್ಸವದ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. : – – --- - -