ಆಗಸ್ಟ್ ಅಂತ್ಯದಲ್ಲಿ ಗೃಹಲಕ್ಷ್ಮೀ, ಡಿಸೆಂಬರ್ ನಂತರ ಯುವ ನಿಧಿ ಜಾರಿ- ಸಿಎಂ ಸಿದ್ಧರಾಮಯ್ಯ . ಮೈಸೂರು,ಆಗಸ್ಟ್,12,2023(..):ಆಗಸ್ಟ್ ಅಂತ್ಯದಲ್ಲಿ ಗೃಹಲಕ್ಷ್ಮೀ ಯೋಜನೆ, ಡಿಸೆಂಬರ್ ನಂತರ ಯುವ ನಿಧಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ನೋಂದಣಿ ಮುಗಿದ ಮೇಲೆ ಗೃಹ ಲಕ್ಷ್ಮಿಗೆ ಚಾಲನೆ ನೀಡುತ್ತೇವೆ. ಗೃಹ ಲಕ್ಷ್ಮಿ ಯೋಜನೆಗೆ 1.33 ಕೋಟಿ ಜನ ನೋಂದಣಿ ಆಗಬೇಕು. ಇದುವರೆಗೆ 1.6 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಬಾಕಿ ಇದೆ. ನೋಂದಣಿ ಪ್ರಕ್ರಿಯೆ ಮುಗಿಯಬೇಕು. ಆಗಸ್ಟ್ ಅಂತ್ಯದಲ್ಲೇ ಗೃಹ ಲಕ್ಷ್ಮಿಗೆ ಚಾಲನೆ ನೀಡುತ್ತೇವೆ. ದಿನಾಂಕ ಮುಂದೂಡಿಕೆ ಆಗಿಲ್ಲ. ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇವೆ. ಇನ್ನೂ ಟೈಮ್ ಕೊಟ್ಟಿಲ್ಲ ಎಂದರು. ಯುವ ನಿಧಿ ಡಿಸೆಂಬರ್‌ ನಂತರ ಜಾರಿ ಮಾಡುತ್ತೇವೆ. ಪದವಿ ಮುಗಿಸಿ ಆರು ತಿಂಗಳು ಕೆಲಸ ಸಿಗದೇ ಇರುವವರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಅಂತ ಹೇಳಿದ್ದೇವೆ. ಡಿಸೆಂಬರ್‌ ಗೆ ಆರು ತಿಂಗಳು ಆಗುತ್ತೆ. ಆದ್ದರಿಂದ ಬಹುಶಃ ಜನವರಿಯಿಂದ ಯುವ ನಿಧಿ ಜಾರಿ ಆಗುತ್ತೆ. ಬಿಎ, ಬಿಎಸ್ಸಿ, ಬಿಕಾಂ, ಎಂಕಾಂ, ಎಂಎಸ್ಸಿ ಮುಂತಾದ ಪದವಿ ಮಾಡಿದವರಿಗೆ 3000 ರೂ. ಕೊಡುತ್ತೇವೆ. ಡಿಪ್ಲೋಮಾ ಮಾಡಿದವರಿಗೆ 1500 ರೂ. ಕೊಡುತ್ತೇವೆ ಎಂದರು. ತಮಿಳುನಾಡು ಕಾವೇರಿ ನೀರು ಬಿಡುವಂತೆ ಮತ್ತೆ ಖ್ಯಾತೆ. ತಮಿಳುನಾಡು ಕಾವೇರಿ ನೀರು ಬಿಡುವಂತೆ ಮತ್ತೆ ಖ್ಯಾತೆ ಆರಂಭಿಸಿದೆ. ಈ ಭಾರಿ ನೀರಿಕ್ಷಿತ ಮಟ್ಟದ ಮಳೆಯಾಗಿಲ್ಲ.ಹೀಗಾಗಿ ಸಂಕಷ್ಟದ ಸೂತ್ರವನ್ನು ಎರೆಡು ರಾಜ್ಯಗಳು ಪಾಲಿಸಬೇಕಿದೆ. ಆದರೂ ತಮಿಳುನಾಡು ನೀರು ಬಿಡುವಂತೆ ಖ್ಯಾತೆ ಶುರುಮಾಡಿದೆ. ಈ ಬಗ್ಗೆ ನಮ್ಮ ತಜ್ಞರ ಜೊತೆ ಚರ್ಚೆ ಮಾಡುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಬಿಬಿಎಂಪಿಯಲ್ಲಿ ಬೆಂಕಿ ಬಿದ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. 40% ಗಿಂತ ಕಡಿಮೆ ಕಡಿಮೆ ಗಾಯವಾಗಿರುವವರಿಗೆ ತೊಂದರೆ ಇಲ್ಲ. ಒಬ್ಬರಿಗೆ 40% ಗಿಂತ ಹೆಚ್ಚು ಗಾಯವಾಗಿದೆ. ಎಲ್ಲಾ ಗಾಯಾಳುಗಳಿಗೂ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದರು. ಏಕರೂಪ ನಾಗರಿಕ ಕಾಯ್ದೆಗೆ ನಮ್ಮ ವಿರೋಧ ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಕಾಯ್ದೆ ಜಾರಿಗೆ ಮುಂದಾಗಿದ್ದು, ಏಕರೂಪ ನಾಗರಿಕ ಕಾಯ್ದೆಗೆ ನಮ್ಮ ವಿರೋಧವಿದೆ. ಕೇರಳದಲ್ಲೂ ಈಗಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ನಾವೂ ಇದಕ್ಕೆ ವಿರೋಧ ಇದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ವಿಚಾರ. ಇದಕ್ಕಾಗಿ ಒಂದು ಸಮಿತಿ ಮಾಡಿದ್ದೇವೆ. ಶಾಸಕರಿಗೂ ಇದರಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಇದನ್ನ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ವಾರ್ಡ್‌ಗಳ ಪುನರ್ ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಕೆಲವೊಂದು ಗಡುವು ನೀಡಿದೆ. ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ. ಅದನ್ನು ಕೋರ್ಟಿಗೆ ನಾವು ನೀಡುತ್ತೇವೆ. ಚುನಾವಣೆ ವಿಚಾರದಲ್ಲಿ ನಾವು ಯಾವುತ್ತು ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಚುನಾವಣೆಗಳನ್ನ ಮುಂದುಡೂತ್ತಿದ್ದರು. ನಾವು ಆ ರೀತಿ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದರು. ಸಿಜೆ ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕ: ಇದೊಂದು ಷಡ್ಯಂತ್ರ. ಸಿಜೆ ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕ ವಿಚಾರ ಕುರಿತು ಬೇಸರ ವ್ಯಕ್ತಪಡಿಸಿದ ಸಿದ‍್ಧರಾಮಯ್ಯ, ಇದೊಂದು ಷಡ್ಯಂತ್ರ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟು ತಮಗೆ ಬೇಕಾದವರನ್ನು ಆಯುಕ್ತರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಐಪಿಸಿ ಸೇರಿದಂತೆ ಕಾನೂನುಗಳ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಐಪಿಸಿ 1861ರಲ್ಲಿ ರಚನೆಯಾದ ಕಾನೂನು. ಏನು ಮಾಡುತ್ತಾರೋ ನೋಡೋಣ ಎಂದರು. : – - – - – .