ಅಗತ್ಯ ವಸ್ತುಗಳ ಬೆಲೆ ಏರಿಕೆ: ಸಂಸತ್ತಿನಲ್ಲೇ ಒಪ್ಪಿಕೊಂಡ ಕೇಂದ್ರ ಸರಕಾರ ! ಬೆಂಗಳೂರು, ಆಗಸ್ಟ್ 05, 2023 (..): ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೇಂದ್ರ ಸರಕಾರ ಸಂಸತ್ತಿನಲ್ಲೇ ಒಪ್ಪಿಕೊಂಡಿದೆ! ಹೌದು. ಬಹುತೇಕ ಆಹಾರ ಪದಾರ್ಥಗಳ ಬೆಲೆ ಭಾರಿ ಏರಿಕೆ ಕಂಡಿದೆ. ತೊಗರಿ ಬೆಳೆ ದರ ಶೇಕಡ 28 ರಷ್ಟು, ಅಕ್ಕಿ ದರ ಶೇಕಡ 10.5 ರಷ್ಟು, ಉದ್ದಿನ ಬೇಳೆ ದರ ಶೇಕಡ 8ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ಬೆಲೆ ಏರಿಕೆ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ದರ ಗಗನಕ್ಕೇರತೊಡಗಿದೆ. ಅಕ್ಕಿ ಚಿಲ್ಲರೆ ದರ ಸರಾಸರಿ 37 ರೂ. ಇದ್ದು, ಈಗ 41 ರೂಪಾಯಿಗೆ ಏರಿಕೆ ಕಂಡಿದೆ. ತೊಗರಿ ಬೇಳೆ ಒಂದು ಕೆಜಿ 106.5 ರೂ. ಇದ್ದು, ಈಗ 136 ರೂಪಾಯಿಗೆ ಏರಿಕೆ ಕಂಡಿದೆ. ಉದ್ದಿನಬೇಳೆ 106.5 ರೂ.ನಿಂದ 114 ರೂ.ಗೆ ಏರಿಕೆಯಾಗಿದೆ.