ಮೈಸೂರು ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಕಳ್ಳರ ಕಾಟ ! ಮೈಸೂರು, ಜುಲೈ 30, 2023 (..): ಜಿಲ್ಲೆಯಲ್ಲಿ ಶುಂಠಿ ಬೆಳೆಗೆ ಕಳ್ಳರ ಕಾಟ ಶುರುವಾಗಿದೆ. ರಾತ್ರೋ ರಾತ್ರಿ ಶುಂಠಿ ಬೆಳೆಗೆ ಖದೀಮರು‌ ಖನ್ನ ಹಾಕಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಟಿಬೇಟಿಯನ್ ನಿರಾಶ್ರಿತರ ಜಮೀನಿನಲ್ಲಿ ಈ ಘಟನೆ ನಡೆದಿದೆ. 80 ಸಾವಿರ ಬೆಲೆ ಬಾಳುವ ಶುಂಠಿ ಕಳ್ಳತನ ಮಾಡಲಾಗಿದೆ. ಟಿಬೆಟಿಯನ್ ರೈತ ಲಾಖಪಾ ಸೇರಿಂಗ್ ಎಂಬುವವರಿಗೆ ಸೇರಿದ ಶುಂಠಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳೆದ ಹಲವು ದಿನಗಳಿಂದ ಸಾಲ ಮಾಡಿ ಉತ್ತಮ ಶುಂಟಿ ಬೆಳೆದಿದ್ದ ರೈತನಿಗೆ ಸಾಕಷ್ಟು ನಷ್ಟವಾಗಿದೆ. ಪ್ರಸ್ತುತ ಶುಂಠಿಗೆ ಉತ್ತಮ ಬೆಲೆ ಹಿನ್ನಲೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ರಾತ್ರೋರಾತ್ರಿ ಜಮೀನಿಗೆ ನುಗ್ಗಿ 8 ಚೀಲ ಶುಂಠಿ ಕಳ್ಳತನ ಮಾಡಲಾಗಿದೆ. ಈ‌ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ಗಸ್ತು ಹೆಚ್ಚಿಸುವಂತೆ ರೈತರ ಮನವಿ ಮಾಡಿದ್ದಾರೆ.