ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ಕೋರ್ಟ್. ಉತ್ತರ ಪ್ರದೇಶ,ಜುಲೈ,21,2023(..):ಉತ್ತರ ಪ್ರದೇಶದಲ್ಲಿನ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಣಾಸಿ ಕೋರ್ಟ್ ಅನುಮತಿ ನೀಡಿದೆ. ಜ್ಞಾನವಾಪಿ ಮಸೀದಿ ಕಾರ್ಬನ್ ಡೇಟಿಂಗ್ ಗೆ ವಾರಣಾಸಿ ಕೋರ್ಟ್ ಆದೇಶ ಹೊರಡಿಸಿದ್ದು, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಮೀಕ್ಷೆ ನಡೆಸಿ ಅಂತಿಮ ವರದಿಯನ್ನು ಆಗಸ್ಟ್ 4 ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಪುರಾತನ ಹಿಂದೂ ದೇವಾಲಯದ ಚಿಹ್ನೆಗಳಿವೆ ಎಂದು ಆರೋಪಿಸಿ ನಾಲ್ವರು ಮಹಿಳಾ ಆರಾಧಕರು ಈ ವರ್ಷ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ವಿವಾದವನ್ನು ಸಂಪೂರ್ಣ ಮಸೀದಿ ಸಂಕೀರ್ಣದ ಪುರಾತತ್ತ್ವ ಶಾಸ್ತ್ರದ ತನಿಖೆಯಿಂದ ಮಾತ್ರ ಪರಿಹರಿಸಬಹುದು ಎಂದು ಜೈನ್ ಈ ಹಿಂದೆ ವಾದಿಸಿದ್ದರು. ಈ ವರ್ಷದ ಆರಂಭದಲ್ಲಿ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವೊಂದರಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿತು. ಅಲಹಾಬಾದ್ ಹೈಕೋರ್ಟ್ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವ ಸಿವಿಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿದ ಮನವಿಯನ್ನು ವಜಾಗೊಳಿಸಿತು. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕನ್ನು ಕೋರಿ ಹಿಂದೂ ಮಹಿಳಾ ಆರಾಧಕರ ಗುಂಪು ಸಲ್ಲಿಸಿದ ಮೊಕದ್ದಮೆ ಮಾನ್ಯವಾಗಿದೆ. ಅದೇ ವೇಳೆ ನ್ಯಾಯಾಲಯವು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಇದೀಗ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಅವಕಾಶ ನೀಡಿದ್ದು, ವಜುಖಾನ ಹೊರತುಪಡಿಸಿ ಉಳಿದೆಡೆ ಸರ್ವೇಗೆ ಅನುಮತಿ ನೀಡಿದೆ. : - - -