ಚಿರತೆ ದಾಳಿಗೆ ಎರಡು ಕರುಗಳು ಬಲಿ: ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರ ಆಗ್ರಹ. ಹನೂರು,ಜುಲೈ,19,2023(..):ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಚಿರತೆ ದಾಳಿಯಿಂದ ಎರಡು ಕರುಗಳು ಬಲಿಯಾಗಿರುವ ಘಟನೆ ನಡೆದಿದೆ. ಇತ್ತೀಚಿಗೆ ಬಾಲಕಿ ಮೇಲೆ ದಾಳಿ ಮಾಡಿ ಸಾವಾಗಿದ್ದ ಪ್ರಕರಣ ಬೆನ್ನಲ್ಲೇ ಮತ್ತೆ ಚಿರತೆಗಳ ಉಪಟಳ ಮುಂದುವರೆದಿದೆ. ಮತ್ತೆ ಜನ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು, ಒಂದು ಚಿರತೆ ಸೆರೆ ಹಿಡಿದಿದ್ದರೂ ಚಿರತೆ ಕಾಟ ಶುರುವಾಗಿದೆ. ಹನೂರು ತಾಲ್ಲೂಕಿನ ಕಾಮಗೆರೆಯ ಹೊರವಲಯದಲ್ಲಿ ಚಿರತೆ ದಾಳಿ ಮಾಡಿದ್ದು, ಗ್ರಾಮದ ಭರತ್ ಎಂಬುವರಿಗೆ ಸೇರಿದ ಹಸು ಬಲಿಯಾಗಿದೆ. ಪದೆ ಪದೆ ಜನ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಮನೆಮಾಡಿದ್ದು, ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. : - - -