ಸುನೀಲ್ ಬೋಸ್ ವಿರುದ್ಧದ ಆರೋಪಕ್ಕೆ ತಿರುಗೇಟು: ಚಕ್ರವರ್ತಿ ಸೂಲಿಬೆಲೆಗೆ ಚರ್ಚೆಗೆ ಆಹ್ವಾನಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್. ಮೈಸೂರು,ಜುಲೈ,,12,2023(..):ಟಿ.ನರಸೀಪುರದಲ್ಲಿ ನಡೆದ ಯುವಬ್ರಿಗೆಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ವಿರುದ್ದ ಆರೋಪಿಸಿದ ಬಿಜೆಪಿ ನಾಯಕರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ. ಸುನಿಲ್ ಬೋಸ್ ಜೊತೆ ಆರೋಪಿ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಆರೋಪ ಹೊರಿಸುವುದು ಎಷ್ಟು ಸರಿ. ಪ್ರಧಾನಿ ಮೋದಿ ಮಂಡ್ಯಗೆ ಬಂದಿದ್ದಾಗ ರೌಡಿ ಶೀಟರ್ ಫೈಟರ್ ರವಿ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗಾದ್ರೇ ಫೈಟರ್ ರವಿ ಮಾಡಿರುವ ತಪ್ಪುಗಳಿಗೆ ಮೋದಿಯನ್ನು ಹೊಣೆ ಮಾಡುತ್ತೀರಾ? ಚಕ್ರವರ್ತಿ ಸೂಲಿಬೆಲೆ ಮಾನಮರ್ಯಾದೆ ಇದ್ದರೆ ಚರ್ಚೆಗೆ ಬಾ ಎಂದು ಎಂ.ಲಕ್ಷ್ಮಣ್ ಸವಾಲು ಹಾಕಿದರು. ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಟಿ ನರಸೀಪುರದಲ್ಲಿ ನಡೆದಿರುವ ಯುವ ಬ್ರಿಗೇಡ್ ಸದಸ್ಯನ ಕೊಲೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಹತಾಶರಾಗಿದ್ದಾರೆ. ಕಾಂಗ್ರೆಸ್ ವರ್ಚಸ್ಸು ದಿನೇ ದಿನೇ ವೃದ್ದಿಯಾಗುತ್ತಿದೆ. ಕೇಂದ್ರ ನಾಯಕರ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೊಲೆಗಳಾಗಿವೆ. ಆದರೂ ಆಯ್ದ ಕೆಲವರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಟಿ.ನರಸೀಪುರ ಕೊಲೆ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೊಲೆ ಆರೋಪಿಗಳ ಪೈಕಿ ಓರ್ವ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 46ರ ಬಿಜೆಪಿ ಸದಸ್ಯೆಯ ತಮ್ಮನಾಗಿದ್ದಾನೆ ಎಂದು ಎಂ ಲಕ್ಷ್ಮಣ್ ಟಾಂಗ್ ನೀಡಿದರು. : -- - - -.