ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ-ಈಶ್ವರಪ್ಪ ಹೇಳಿಕೆಗೆ ಮಾಜಿ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ. ಚಿಕ್ಕಮಗಳೂರು,ಜೂನ್,26,2023(..):ಬಿಜೆಪಿಯಲ್ಲಿ ಶಿಸ್ತು ಹೋಗಿದೆ, ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ಅನುಭವಿಸುತ್ತಿದ್ದೇವೆ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ನಾನು ಇದರ ಬಗ್ಗೆ ಸಾರ್ವಜನಿಕ ಚರ್ಚೆಗೆ ಹೋಗಲ್ಲ. ಎಲ್ಲವನ್ನೂ ಬಂದವರ ತಲೆ ಮೇಲೆ ಕಟ್ಟಲು ಇಷ್ಟ ಪಡುವುದಿಲ್ಲ. ಯಾರು ಸರಿ ಅಂತಲೂ ನಾವು ಹೇಳುವುದಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಏನೇ ಇದ್ದರೂ ಮಾತಾಡುತ್ತೇನೆ. ನಮ್ಮಿಂದ ಏನೂ ತಪ್ಪು ಆಗಿಲ್ಲ ಅನ್ನೋದು ಬೇಡ, ಕೆಲವು ತಪ್ಪಾಗಿದೆ. ಆ ತಪ್ಪು ಆಗದ ರೀತಿ ಮುಂದೆ ಹೋಗೋಣ ಎಂದರು. ಕಾಂಗ್ರೆಸ್ ​​ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು- ಎಂಎಲ್ ಸಿ ರವಿಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ರವಿಕುಮಮಾರ್, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್​​ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು, ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ರವಿ ಕುಮಾರ್, ಬಿಜೆಪಿ ಸರ್ಕಾರ ಅವಧಿಯ ಯಾವುದೇ ವಿಚಾರ ತನಿಖೆ ಮಾಡಲಿ. ಯಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ, ಎದುರಿಸುತ್ತೇವೆ. ಸರ್ಕಾರದ ತನಿಖೆಗೆ ನಾವು ಹೆದರಲ್ಲ ಎಂದು ತಿಳಿಸಿದರು. : - - -