ಹನುಮಂತನ ಹೆಸರು ಇಟ್ಟುಕೊಂಡವರೆಲ್ಲಾ ಆಂಜನೇಯ ಆಗಲು ಸಾಧ್ಯವಿಲ್ಲ- ಡಿ.ಕೆ ಶಿವಕುಮಾರ್ ಟಾಂಗ್. ಮೈಸೂರು,ಮೇ,4,2023(..):ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ವಾ? ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ. ಹನುಮಂತನ ಹೆಸರು ಇಟ್ಟುಕೊಂಡವರೆಲ್ಲಾ ಆಂಜನೇಯ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಯವರಿಗೆ ಗಾಬರಿ ಆಗಿದೆ. ಬಜರಂಗದಳದವರು ನೈತಿಕ ಪೊಲೀಸ್​​ಗಿರಿ ಮಾಡುತ್ತಿದ್ದಾರೆ. ದೇವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯವರು ಒಂದಾದರೂ ಆಂಜನೇಯ ದೇಗುಲ ಕಟ್ಟಿದ್ದಾರಾ? ರಾಜ್ಯದಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಅಧಿಕಾರಕ್ಕೆ ಬಂದರೆ ಆಂಜನೇಯ ದೇಗುಲ ಅಭಿವೃದ್ಧಿಗೆ ಒತ್ತು. ಆಂಜನೇಯ ದೇಗುಲ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತೇವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ಮಾಡುತ್ತೇವೆ. ಯುವಕರಲ್ಲಿ ಆಂಜನೇಯ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ನಡೆಸುತ್ತೇವೆ ಎಂದು ತಿಳಿಸಿದರು. ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನ ಸುಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಬಿಜೆಪಿಯವರು ಕೆ.ಎಸ್ ಈಶ್ವರಪ್ಪರನ್ನೇ ಸುಟ್ಟಿ ಹಾಕಿದ್ದಾರೆ. ಭ್ರ‍ಷ್ಟಾಚಾರ ತಾಂಡವಾಡುತ್ತಿದೆ ಅಂತಾ ಈಶ್ವರಪ್ಪರನ್ನೇ ಸುಟ್ಟಿ ಹಾಕಿದರು. ಆ ಕಾರ್ಯಕರ್ತನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ವ್ಯಂಗ್ಯವಾಡಿದರು. : – --