ಇದು ನನ್ನ ಕೊನೆಯ ಚುನಾವಣೆ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘೋಷಣೆ. ಹುಬ್ಬಳ್ಳಿ,ಮೇ,3,2023(..):ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. ಜನರಿಗೆ ನೀಡಲಾದ ಕರ ಪತ್ರದಲ್ಲಿ ಇದು ನನ್ನ ಕೊನೆ ಚುನಾವಣೆ ಎಂದು ಘೋಷಿಸಿದ್ದಾರೆ. ನಾನು ಏಳನೇ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ. ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಕೆಟ್ಟು ಹೋಗಿರುವ ವ್ಯವಸ್ಥೆ ಸರಿಪಡಿಸುವ ಉದ್ದೇಶ ಇದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ರಾಜ್ಯದಲ್ಲಿ ನಾಲ್ಕು ದಶಕಗಳ ಕಾಲ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ನಾನು ವಿನಾಕಾರಣ ಬಿಜೆಪಿ ತೊರೆದಿಲ್ಲ. ಬೆವರು ಸುರಿಸಿ ಕಟ್ಟಿದ ಮನೆ ಬಿಡುವುದು ಅಷ್ಟು ಸುಲಭ ಇರಲ್ಲಿಲ್ಲ. ಈಗ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದೇನೆ. ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು. ಬಿಜೆಪಿಯಲ್ಲಿ ನಾನು ಕನಸಲ್ಲಿ ಊಹಿಸದ ಪರಿಸ್ಥಿತಿ ಸೃಷ್ಟಿ ಮಾಡಿದರು. ನನ್ನನ್ನು ರಾಜಕೀಯವಾಗಿ ಮುಗಿಸಲು ಕೆಲವರು ಷಡ್ಯಂತ್ರ ನಡೆಸಿದರು. ನನ್ನಂತಹ ಹಿರಿಯ ನಾಯಕರಿಗೆ ಅಪಮಾನ ಯಾಕೆ ಮಾಡಿದ್ರು‌? ಇದಕ್ಕೆ ಬಿಜೆಪಿ ನಾಯಕರೇ ಉತ್ತರಿಸಬೇಕಿದೆ ಎಂದು ಜಗದೀಶ್ ಶೆಟ್ಟರ್​ ಅಸಮಾಧಾನ ಹೊರ ಹಾಕಿದರು. ಓರ್ವ ವ್ಯಕ್ತಿಯು ಸೋಲನ್ನು ಸಹಿಸಬಹುದು. ಅಪಮಾನ ಸಹಿಸಲು ಸಾಧ್ಯವೆ? ಕೆಲವರ ಹಿತಕ್ಕಾಗಿ ಪಕ್ಷ ನಲಗುತ್ತಿದೆ. ಕೆಲವರ ಕಪಿಮುಷ್ಟಿಯಲ್ಲಿ ಬಿಜೆಪಿ ಇದೆ. ಇಂದು ಕೇಂದ್ರ ನಾಯಕರಿಗೆ ಮಾಹಿತಿ ಇಲ್ಲ. ಸ್ವಾರ್ಥಕ್ಕಾಗಿ ಮಾಡ್ತಿರೋದು ಪಕ್ಷಕ್ಕೆ ಒಳಿತಾಗಲು ಸಾಧ್ಯವೆ ಇಲ್ಲ. ಹೀಗೆಲ್ಲ ಕುತಂತ್ರ ಮಾಡೋರಿಗೆ ಇದು ತಿರುಗುಬಾಣವಾಗಲಿದೆ ಬಿ.ಎಲ್ ಸಂತೋಷ್ ವಿರುದ್ದ ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. : - - - -