ವರುಣಾ ಕ್ಷೇತ್ರದಲ್ಲಿ ಮತ್ತೊಮ್ಮೆ ಸಿದ್ಧರಾಮಯ್ಯ ಗೆಲ್ಲಲು ಸಹಕರಿಸಿ- ವೀರಶೈವ ಲಿಂಗಾಯತ ಮುಖಂಡರಲ್ಲಿ ಯತೀಂದ್ರ ಸಿದ್ಧರಾಮಯ್ಯ ಮನವಿ. ಮೈಸೂರು,ಮೇ,1,2023(..):ವರುಣಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆಗಿಳಿದಿದ್ದಾರೆ ಹೀಗಾಗಿ ಅವರು ಗೆಲ್ಲಲು ಸಹಕರಿಸಿ ಬೆಂಬಲ ನೀಡಿ ಎಂದು ವೀರಶೈವ ಲಿಂಗಾಯತ ಮುಖಂಡರಲ್ಲಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ ಮನವಿ ಮಾಡಿದರು. ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರ ಸಭೆ ಹಾಗೂ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಇಂದು ಮೈಸೂರಿನ ವಿಶ್ವೇಶ್ವರ ನಗರದ ರಾಹುಲ್ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಈ ಹಿಂದೆ ನನ್ನ ತಂದೆ ಸಿದ್ಧರಾಮಯ್ಯ ಅವರ ಗೆಲುವಿಗೆ ಹಾಗೂ ಸಿಎಂ ಆಗಲು ಬೆಂಬಲಿಸಿದ್ದೀರಿ. ಹಾಗೆಯೇ ನಾನು ಶಾಸಕನಾಗಲು ಸಹ ವೀರಶೈವ ಲಿಂಗಾಯತ ಸಮುದಾಯ ನೀಡಿರುವ ಸಹಕಾರ ನಾನು ಎಂದು ಮರೆಯುವುದಿಲ್ಲ. ಈ ಬಾರಿ ಸಿದ್ಧರಾಮಯ್ಯ ಅವರು ಮತ್ತೆ ವರುಣಾದಿಂದಲೇ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಗೆಲುವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದರು. ಈ ನಡುವೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ವೀರಶೈವ ಲಿಂಗಾಯತ ಮುಖಂಡರುರನ್ನ ಗುರುತಿಸಿ ಉತ್ತಮ ಸ್ಥಾನಮಾನ ನೀಡಲಿದೆ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ಭರವಸೆ ನೀಡಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ವೀರಶೈವ ಮುಖಂಡ ವರುಣಾ ಮಹೇಶ್, ಗುರುಪಾದಸ್ವಾಮಿ, ದಾಸನೂರ್ ನಾಗೇಶ್, ನಂಜಪ್ಪ, ಕಿಳನಪುರ ಮಹಾದೇವಪ್ಪ ಉಪಸ್ಥಿತರಿದ್ದರು. : – - – –