ಪ್ರಧಾನಿಯಾಗುವ ಅವಕಾಶವಿದೆ ಎಂದ ಲಕ್ಷ್ಮಣ್ ಸವದಿಗೆ ಟಾಂಗ್: ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಿಎಂ ಬೊಮ್ಮಾಯಿ ಸಲಹೆ. ಬೆಂಗಳೂರು,ಏಪ್ರಿಲ್,12,2023(..):ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡು ಪಕ್ಷ ತೊರೆಯಲು ಮುಂದಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ. ಇಂದು ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಲಕ್ಷ್ಮಣ್ ಸವದಿ ಜತೆ ನಾನು ಮಾತನಾಡಿದ್ದೇನೆ. ಲಕ್ಷ್ಮಣ್ ಸವದಿ ಮೇಲೆ ವಿಶ್ವಾಸವಿದೆ. ಸವದಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಲಕ್ಷ್ಮಣ್ ಸವದಿಗೆ ಇದೇ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ಕೆಲವೆಡೆ ಅಕಾಂಕ್ಷಿಗಳು ಬೇಸರದಲ್ಲಿದ್ದಾರೆ. ನಾನು ಆಕಾಂಕ್ಷಿಗಳ ಸಂಪರ್ಕದಲ್ಲಿದ್ದೇನೆ. ಆರ್ ಶಂಕರ್ ಜೊತೆಗೂ ಮಾತನಾಡುತ್ತೇನೆ ಎಂದರು. ಇನ್ನು ಬಸವರಾಜ ಬೊಮ್ಮಾಯಿಗೆ ಪ್ರಧಾನಿಯಾಗುವ ಅವಕಾಶವಿದೆ ಎಂದು ಲೇವಡಿ ಮಾಡಿದ ಲಕ್ಷ್ಮಣ್ ಸವದಿಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ, ನನಗೆ ದೊಡ್ಡ ಆಸೆಗಳೇನು ಇಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದರು. ಬೊಮ್ಮಾಯಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ನಾವು ಬಿಜೆಪಿಗೆ ಸೇರಿಸಿದ್ದು ಎಂಬ ಹೇಳಿಕೆಗೂ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಯಾರ್ಯಾರು ಎಲ್ಲೆಲ್ಲಿ ಸೇರಿದ್ರು ಅನ್ನೋದು ಗೊತ್ತಿದೆ. ನಾನು ಮನೆಯಲ್ಲಿಯೇ ಇದ್ದೇ ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಮೊದಲು ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್ ಬಂದು ಮಾತನಾಡಿದ್ದರು. ಅ ಮೇಲೆ ಲಕ್ಷ್ಮಣ್ ಸವದಿ ಸಿಸಿ ಪಾಟೀಲ್ ಬಂದರು ಎಂದು ತಿಳಿಸಿದರು. : - - - - -