ಸಿನಿಮಾ ಸ್ಟಾರ್ ಗಳನ್ನ ಕರೆಸಿ ಪ್ರಚಾರ: ಈ ಬಾರಿ ಬಿಜೆಪಿಗೆ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ- ಮಾಜಿ ಸಿಎಂ ಹೆಚ್.ಡಿಕೆ ಟೀಕೆ. ಬೆಂಗಳೂರು,ಏಪ್ರಿಲ್,5,2023(..):ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ. ಹೀಗಾಗಿ ಸಿನಿಮಾ ಸ್ಟಾರ್ ಗಳನ್ನ ಕರೆಸಿ ಪ್ರಚಾರ ಮಾಡಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ನಟ ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದು ಬಿಜೆಪಿ ಪರ ಪ್ರಚಾರ ಮಾಡುತ್ತಾರೆಂಬ ವದಂತಿ ಇದೆ. ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ನಮಗೆ ನಮ್ಮ ಕಾರ್ಯಕರ್ತರು ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಒಂದು ಪಕ್ಷದ ಪರ ಪ್ರಚಾರ ಮಾಡಿ ಆ ಮೇಲೆ ಸುಮ್ಮನಾಗುತ್ತಾರೆ. ಸಿನಿಮಾ ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ ಎಂದರು. ಸ್ಟಾರ್ ಗಳಿಂದ ನಿಖಿಲ್ ಸೋತಿದ್ದಾರೆ ಅಂತಿದ್ದಾರೆ. ಆದರೆ ಅದು ಸುಳ್ಳು. ನಿಖಿಲ್ ಸೋತಿದ್ದು ಬಿಜೆಪಿ ಕಾಂಗ್ರೆಸ್, ರೈತ ಸಂಘದ ಒಳ ಒಪ್ಪಂದದಿಂದ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. : –- - - ..-