ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ: ಅಭಿವೃದ್ದಿ ಕೆಲಸ ಮಾಡಿದ್ರೆ ಧನ್ಯವಾದ ಹೇಳ್ತೇನೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಹಾಸನ,ಮಾರ್ಚ್,10,2023(..):ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚಿಸಿದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅವರು ದೊಡ್ಡವರು, ದೊಡ್ಡ ಪಕ್ಷಕ್ಕೆ ಸೇರುತ್ತಿದ್ದಾರೆ. ಅವರು ಸುಮಲತಾ ಅಭಿವೃದ್ಧಿ ಕೆಲಸ ಮಾಡಿದ್ದರೆ ಮಂಡ್ಯ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಬೇಲೂರಿನಲ್ಲಿ ಪಂಚರತ್ನ ಸಮಾವೇಶ ಉದ್ದೇಶಿಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದು ಮತ್ತು ಅವರ ಹೇಳಿಕೆಗಳಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದರು. ನನ್ನ ಅರೋಗ್ಯ ಸಮಸ್ಯೆ ಕಡೆಗಣಿಸಿ ನಾನು ಶ್ರಮಿಸುತ್ತಿದ್ದೇನೆ. ಸ್ವಾರ್ಥಕ್ಕಾಗಿ ನನ್ನ ದೇಹ ದಂಡನೆ ಮಾಡುತ್ತಿಲ್ಲ. ಸಿಎಂ ಆಗಬೇಕೆಂದು ಈ ರೀತಿ ಶ್ರಮ ವಹಿಸುತ್ತಿಲ್ಲ. ನಮ್ಮ ಮನೆಯ ಬಳಿ ಬರುವ‌ ಬಡ ತಾಯಂದಿರ ಕಣ್ಣೀರು ನೋಡಿದ್ದೇನೆ. ಬಡವರ, ರೈತರ ಕಣ್ಣೀರು ಒರೆಸಬೇಕು ಎನ್ನುವುದೊಂದೇ ನನ್ನ ಉದ್ದೇಶ. ಮುಂದೆ ಜೆಡಿಎಸ್​ ನ ಬಹುಮತದ ಸರ್ಕಾರ ಬರುತ್ತದೆ, ಐದು ವರ್ಷ ಆಡಳಿತ ನಡೆಸಲಿದೆ ಎಂದು ನೋವಿನಲ್ಲಿ ಇರುವವರಿಗೆ ಹೇಳಿದ್ದೇನೆ. ರೈತರು ಸಾಲಗಾರ ಆಗಬಾರದು ಎನ್ನುವುದು ನನ್ನ ಗುರಿ. ಕೇವಲ 37 ಶಾಸಕರನ್ನು ಇಟ್ಟುಕೊಂಡು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆ. ನಮ್ಮನ್ನು ವಿರೋಧಿಸಿದ್ದವರೇ ಸರ್ಕಾರ ರಚಿಸೋಣ ಎಂದು ಬಂದಾಗ ರೈತರ ಸಾಲಾ ಮನ್ನ ಮಾಡುವ ಉದ್ದೇಶದಿಂದ ಜೊತೆ ಸೇರಿದ್ದೆ ಎಂದು ತಿಳಿಸಿದರು. ದೇಶದ ಪ್ರಗತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಬಡ ಜನರ ಮಕ್ಕಳು ಶಿಕ್ಷಣ ಪಡೆಯಲು ಆಗದೆ ಪರದಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹೆಚ್.ಡಿಕೆ ಕಿಡಿಕಾರಿದರು. : -- --