ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣ ನಮ್ಮದು: ದಾಖಲೆ ಕೊಟ್ಟು ವಾಪಸ್ ತರುತ್ತೇವೆ- ಶಾಸಕ ಮಾಡಾಳ್ ವಿರೂಪಾಕ್ಷಪ್ಪ. ದಾವಣಗೆರೆ,ಮಾರ್ಚ್,7,2023(..):ಲೋಕಾಯುಕ್ತ ದಾಳಿ ವೇಳೆ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿ ಕಳೆದ ಆರು ದಿನಗಳಿಂದ ತಲೆಮರಿಸಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇದೀಗ ಮಧ್ಯಂತರ ಜಾಮೀನು ಸಿಕ್ಕ ತಕ್ಷಣವೇ ಪ್ರತ್ಯಕ್ಷರಾಗಿದ್ದಾರೆ. ಹುಟ್ಟೂರು ಚನ್ನೇಶಪುರದಲ್ಲಿ ಪ್ರತ್ಯಕ್ಷರಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಸಿಕ್ಕಿರುವ ಹಣ ನಮ್ಮದು. ನಾವು ಸಂಪಾದಿಸಿದ ಹಣ. ಅದಕ್ಕೆ ದಾಖಲೆ ಒದಗಿಸಿ ವಾಪಾಸ್ ಪಡೆಯುತ್ತೇವೆ ಎಂದಿದ್ದಾರೆ. ಆರೋಪ ಬಂದಿದ್ದರಿಂದ ನಾನು ಜನರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾನು ಎಲ್ಲೂ ಓಡಿಹೋಗಿರಲಿಲ್ಲ. ಊರಿನಲ್ಲೇ ಇದ್ದೆ. ಅಡಕೆ ತೋಟ, ಕ್ರಷರ್​​ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ಲೋಕಾಯುಕ್ತ ದಾಳಿ ವೇಳೆ ಈ ಹಣ ಅವರಿಗೆ ಸಿಕ್ಕಿದೆ. ಅದನ್ನು ಅವರು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ. ಸೂಕ್ತ ದಾಖಲೆಗಳನ್ನು ನೀಡಿ ಮತ್ತೆ ಪಡೆದುಕೊಳ್ಳುತ್ತೇವೆ. ಕೆಎಸ್​ಡಿಎಲ್​ ಅಧ್ಯಕ್ಷನಾಗಿ ನಿಯಮಬಾಹಿರ ಕೆಲಸ ಮಾಡಿಲ್ಲ. ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ. : - -- – - .