ದೆಹಲಿಯಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ: ಪ್ರಧಾನಿ ಮೋದಿ, ಬೊಮ್ಮಾಯಿ ಭಾಗಿ ದೆಹಲಿ, ಫೆಬ್ರವರಿ 26, 2023 (..): ದೆಹಲಿಯಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ (ಬಾರಿಸು ಕನ್ನಡ ಡಿಂಡಿಮ)ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಕಲಿಯುವ ಜತೆಗೆ ಕನ್ನಡವನ್ನು ಕಲಿಸಬೇಕು. ‘ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ’ ಎಂಬ ಮಾತನ್ನು ಸ್ವಯಂಪ್ರೇರಣೆಯಿಂದ ಪಾಲಿಸಬೇಕು. ಕನ್ನಡವೊಂದು ವಿಶಿಷ್ಟ ಭಾಷೆ. ಕನ್ನಡ ಸಾಹಿತ್ಯವೂ ವಿಶಾಲವಾಗಿ ಹಬ್ಬಿದೆ ಎಂದು ಹೇಳಿದರು. ಕರ್ನಾಟಕ ಸಂಘ ದೆಹಲಿಯ ಕನ್ನಡಿಗ ಮಕ್ಕಳಿಗೆ ಕನ್ನಡ ಕಲಿಸಲು ಮುಂದಾಗಬೇಕು. ನಿಮ್ಮ ಲೈಬ್ರೆರಿಯನ್ನು ಇದಕ್ಕೆ ಬಳಸಿಕೊಳ್ಳಬೇಕು. ಕನ್ನಡ ಕಲಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಈ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೋದಿ ಕಿವಿಮಾತು ಹೇಳಿದರು. ಮೋದಿಕನ್ನಡಪ್ರೀತಿ:ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ರಾಜ್ಯದಲ್ಲಿ ವಿಪಕ್ಷಗಳು ಹಾಗೂ ಕೆಲ ಕನ್ನಡ ಹೋರಾಟಗಾರರು ಆರೋಪ ಮಾಡುತ್ತಿರುವ ಮಧ್ಯೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಪ್ರಧಾನಿ ಅಭಿಮಾನ ವ್ಯಕ್ತಪಡಿಸಿದ್ದು ದೆಹಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ದಿಲ್ಲಿ ಕನ್ನಡಿಗರ ಉತ್ಸಾಹ ಖುಷಿ ಕೊಟ್ಟಿದೆ. ಕನ್ನಡ ನಾಡಿನಲ್ಲಿ ಹುಟ್ಟುವುದೇ ಸೌಭಾಗ್ಯ. ಈ ಭಾಗ್ಯ ಪಡೆದಿರುವ ನಾವೆಲ್ಲರೂ ಪೂರ್ವಜನ್ಮದ ಪುಣ್ಯವಂತರು ಎಂದು ಸಿಎಂ ಬೊಮ್ಮಾಯಿ ಹೇಳಿದರು.