ಒಕ್ಕಲಿಗರು ಯಾವುದೇ ಪಾರ್ಟಿಯಲ್ಲಿದ್ರೂ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು-ಶಾಸಕ ಜಿ.ಟಿ ದೇವೇಗೌಡ ಮೈಸೂರು,ಆಗಸ್ಟ್,14,2024 (..):ಒಕ್ಕಲಿಗರು ಯಾವುದೇ ಪಕ್ಷದಲ್ಲಿದ್ದರೂ ಸರಿ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಕಿವಿಮಾತು ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಉದ್ಯಮಿ ಒಕ್ಕಲಿಗ ವಾರ್ಷಿಕ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ಮೊಟ್ಟ ಮೊದಲ‌ ಸಮಾವೇಶವನ್ನ ಇಂದಿನಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಠದ‌‌ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಶಾಸಕರಾದ ಜಿ. ಟಿ ದೇವೇಗೌಡ, ಹರೀಶ್ ಗೌಡ, ಐಪಿಎಸ್ ಅಧಿಕಾರಿ ಪ್ರಕಾಶ್ ಗೌಡ, ಉದ್ಯಮಿ ಒಕ್ಕಲಿಗದ ಜಯರಾಮ್ ರಾಯಪುರ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತಿರಿದ್ದರು. ಸಮಾವೇಶದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಮೈಸೂರು ನಗರದ ಸುತ್ತಮುತ್ತಲಿನ 40 ಕಿ. ಮೀ ವ್ಯಾಪ್ತಿಯಲ್ಲಿರುವ ಜಮೀನು ಒಕ್ಕಲಿಗರಿಗೆ ಸೇರಿದೆ. ಸಮಾಜಕ್ಕೆ ಅನ್ನ ನೀಡುವ ಕೆಲಸವನ್ನು ಒಕ್ಕಲಿಗ ಸಮಾಜ ಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಕ್ಕಲಿಗ ಸಮುದಾಯ ತೊಂದರೆ ಅನುಭವಿಸುತ್ತಿದೆ. ಒಕ್ಕಲಿಗ ಉದ್ಯಮಿಗಳು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ಉದ್ಯೋಗ ಕೊಡಬೇಕು. ರಾಜಸ್ಥಾನದಿಂದ ಬಂದಿರುವವರು ಇಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳನ್ನು ಮಾಡುತ್ತಿದ್ದಾರೆ. ಈ ಮಣ್ಣಿನಲ್ಲಿ ಹುಟ್ಟಿರುವವರೂ ಉದ್ದಿಮೆಗಳನ್ನು ಸ್ಥಾಪನೆ ಮಾಡಬೇಕು. ಒಕ್ಕಲಿಗರು ಯಾವುದೇ ಪಕ್ಷದಲ್ಲಿದ್ದರೂ, ಸಮುದಾಯದ ವಿಚಾರ ಬಂದಾಗ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸರ್ಕಾರ ಯಾವುದೇ ಇದ್ದರೂ ನೇತೃತ್ವ ವಹಿಸುವ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ ಸಿಗುತ್ತದೆ. ಇದರಿಂದ ಎಲ್ಲವೂ ಅಯೋಮಯವಾಗುತ್ತಿದೆ. ಒಕ್ಕಲಿಗ ಉದ್ಯಮಿಗಳು ಒಂದೆಡೆ ಸೇರಿರುವುದು ಆಶಾದಾಯಕ ಬೆಳವಣಿಗೆ ಆಗಿದೆ. ಪರಸ್ಪರ ಸಹಕಾರದ ಮೂಲಕ ಒಕ್ಕಲಿಗ ಉದ್ದಿಮೆದಾರರು ಮುಂದೆ ಬರಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಕರೆ ನೀಡಿದರು. ಉದ್ಯಮಿ ಒಕ್ಕಲಿಗ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗರು ಒಂದು ಕಾಲದಲ್ಲಿ ಖಡ್ಗ ಹಿಡಿದು ರಾಜ್ಯವಾಳಿದ್ದಾರೆ. ನೇಗಿಲು ಹಿಡಿದು ವ್ಯವಸಾಯ ಮಾಡುತ್ತಿದ್ದವರು ಖಡ್ಗ ಹಿಡಿದು ರಾಜ್ಯವಾಳಿದರು. ಗಂಗ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಒಕ್ಕಲಿಗರು. ಸಾಹಿತ್ಯ ಕ್ಷೇತ್ರದಲ್ಲಿ ಒಕ್ಕಲಿಗರ ಕೊಡುಗೆ ಅಪಾರ. ಹೊಯ್ಸಳರ ಕಾಲದಲ್ಲೂ ಒಕ್ಕಲಿಗ ಸಮುದಾಯದ ಶಾಂತಲೆಯ ಸಾಧನೆ ಅಪ್ರತಿಮವಾದುದು. ಕಾಲಾನಂತರದಲ್ಲಿ ಮತ್ತೆ ಒಕ್ಕಲಿಗ ಸಮುದಾಯ ನೇಗಿಲು ಹಿಡಿದು ವ್ಯವಸಾಯ ಮಾಡುವ ಮೂಲಕ ಒಕ್ಕಲಿಗ ಎಲ್ಲಾ ಸಮಾಜಕ್ಕೂ ಅನ್ನ ನೀಡುತ್ತಾ ಬಂದಿದೆ. ಒಕ್ಕಲಿಗ ಸಮುದಾಯ ಸಮಾಜದ ವಿವಿಧ ವಲಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದೆ ಎಂದು ನುಡಿದರು. : , , , , ,