ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಬಿಎಸ್ ವೈ ಮತ್ತು ಪ್ರಹ್ಲಾದ್ ಜೋಶಿ. ವಿಜಯಪುರ,ಜನವರಿ,3,2023(..):ಲಿಂಗೈಕ್ಯರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಹಲವು ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದರು. ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಗಣ್ಯಾತೀಗಣ್ಯರು ಲಕ್ಷಾಂತರ ಭಕ್ತರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಗಳಾದ ಬಿಎಸ್ ಯಡಿಯೂರಪ್ಪ,ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ಶ್ರೀಗಳು ಪ್ರವಚನದ ಮೂಲಕ ದೇಶ ವಿದೇಶಗಳಲ್ಲಿ ಭಕ್ತರನ್ನ ಹೊಂದಿದ್ದರು ಕಳೆದ 6 ತಿಂಗಳ ಹಿಂದೆ ಶ್ರೀಗಳನ್ನ ಭೇಟಿಯಾಗಿದ್ದೆ. ಸಿದ್ಧೇಶ್ವರ ಶ್ರೀಗಳು ಅಪಾರ ಭಕ್ತರನ್ನ ಹೊಂದಿದ್ದಾರೆ. ಅವರ ಅಗಲಿಕೆ ನನಗೆ ಆಘಾತ ತಂದಿದೆ ಎಂದರು. ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೊನ್ನಯಷ್ಟೆ ಶ್ರೀಗಳ ಆರೋಗ್ಯ ವಿಚಾರಿಸಿದ್ದವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ್ದವು. ಪ್ರಧಾನಿ ಜೊತೆ ಪೋನ್ ನಲ್ಲಿ ಮಾತನಾಡುವಾಗ ಕೈ ಮುಗಿದಿದ್ದರು. ಪ್ರಧಾನಿ ಮೋದಿ ನಿನ್ನೆ ಕೂಡ ಪೂಜ್ಯರ ಆರೋಗ್ಯ ವಿಚಾರಿಸಿದ್ದರು. ಸಿದ್ಧೇಶ್ವರ ಸ್ವಾಮೀಜಿ ನುಡಿದಂತೆ ನಡೆದಿದ್ದಾರೆ. ಭಾರತ ಸರ್ಕಾರದ ಪರವಾಗಿ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು. : – - - .