ರಾಜಕೀಯ ಒತ್ತಡಕ್ಕೆ ಮಣಿದು ಪಂಚಮಸಾಲಿಗೆ 2ಎ ಮೀಸಲಾತಿ ನೀಡಿದ್ರೆ ಉಗ್ರ ಹೋರಾಟ- ಸರ್ಕಾರಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಕೆ. ಬೆಂಗಳೂರು,ಡಿಸೆಂಬರ್,22,2022(..):ರಾಜಕೀಯ ಒತ್ತಡಕ್ಕೆ ಮಣಿದು ಪಂಚಮಸಾಲಿಗೆ 2ಎಮೀಸಲಾತಿ ನೀಡಿದರೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಖಡಕ್ ಎಚ್ಚರಿಕೆ ನೀಡಿದೆ. ರಾಜಕೀಯ ಒತ್ತಡಕ್ಕೆ ಮಣಿದು ಪಂಚಮಸಾಲಿಗೆ 2ಎ ಮೀಸಲಾತಿ ನೀಡಬಾರದು. ಬಲಾಢ್ಯರಿಗೆ ಮೀಸಲಾತಿ ನೀಡಿದರೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಸಿದೆ. ಈ ಮೂಲಕ 2ಎ ಮೀಸಲಾತಿಗೆ ಆಗ್ರಹಿಸಿ ಹಠ ಹಿಡಿದಿರುವ ಪಂಚಮಸಾಲಿ ಸಮುದಾಯದ ವಿರುದ್ಧ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಡಿ.26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ. ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಒಕ್ಕೂಟವು ರಾಜ್ಯಾದ್ಯಂತ ಎಲ್ಲಾ ಸದಸ್ಯರಿಗೆ ಮನವಿ ಮಾಡಿಕೊಂಡಿದೆ. ಪಂಚಮಸಾಲಿಗಳು 3ಬಿ ಅಡಿಯಲ್ಲಿ ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಶೇ,50ರಷ್ಟು ಸಾಮಾನ್ಯ ಮೀಸಲಾತಿಯನ್ನು ಬಳಸುವ ಅವಕಾಶವನ್ನು ಹೊಂದಿರುವಾಗ, 104 ಜಾತಿಗಳು ಹಂಚಿಕೊಂಡಿರುವ 2ಎ ಮೀಸಲಾತಿಯನ್ನೇಕೆ ಬಯಸುತ್ತಿದ್ದಾರೆಂದು ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸದಸ್ಯರು ಚಾಟಿ ಬೀಸಿ ಪ್ರಶ್ನಿಸಿದ್ದಾರೆ. ಇನ್ನು ಇತ್ತ ಮೀಸಲಾತಿ ನೀಡಿದರೇ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ತೀವ್ರ ಹೋರಾಟದ ಬಿಸಿ ಹಾಗೂ ಮೀಸಲಾತಿ ನೀಡದಿದ್ದರೇ ಪಂಚಮಸಾಲಿ ಹೋರಾಟದ ಬಿಸಿ ತಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. : -2A- - - - – .