ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮೈಸೂರು ನಗರ ಸುತ್ತಾಡಿದ ಸಿಎಂ ಸಿದ್ದರಾಮಯ್ಯ; ಹೆಚ್ಚಾಯ್ತಾ ಮುಡಾ ಟೆನ್ಷನ್! ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಪೊಲೀಸ್ ಎಸ್ಕಾರ್ಟ್ ಬಿಟ್ಟು ಮೈಸೂರಲ್ಲಿ ಒಂಟಿಯಾಗಿ ಸಂಚಾರ ಮಾಡಿದ್ದಾರೆ. ಮೈಸೂರು (ಆ.06):ರಾಜ್ಯದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ( ) ಸಿಲುಕಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪೊಲೀಸ್ ಎಸ್ಕಾರ್ಟ್‌ ಬಿಟ್ಟು ಎಲ್ಲೆಂದರಲ್ಲಿ ಒಬ್ಬಂಟಿಯಾಗಿ ಸುತ್ತಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಗರಣಗಳ ಕಂಟಕ ಶುರುವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸೈಟು ಹಂಚಿಕೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಹೆಸರಿಗೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಮಾಡಲಾಗುತ್ತಿದೆ. ಆದರೆ, ತನಿಖಾ ವರದಿ ಬರುವ ಮುನ್ನವೇ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಕೆಲವು ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಪ್ರಾಸಿಕ್ಯೂಷನ್ ನೊಟೀಸ್ ಜಾರಿ ಮಾಡಿದ್ದಾರೆ. ಮಾಜಿ ಪ್ರಧಾನಿ ಮನವಿ ಮೇರೆಗೆ ರಾಜಕೀಯಕ್ಕೆ ಬಂದ ಗೃಹ ಸಚಿವ ಪರಮೇಶ್ವರ ವಿದ್ಯಾಭ್ಯಾಸವೇನು? ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಿಂದ ರಾಜ್ಯಪಾಲರ ನೊಟೀಸ್ ವಿರುದ್ಧ ಕಾನೂನು ಹೋರಾಟ ಮಾಡುವುದಕ್ಕೆ ನಿರ್ಣಯ ಕೈಗೊಂಡಿದ್ದಾರೆ. ಆದರೆ, ಮತ್ತೊಂದರೆ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಮೈತ್ರಿ ಪಕ್ಷಗಳಿಂದ ಬೆಂಗಳೂರಿನಿಂದ ಮೈಸೂರು ನಗರದವರೆಗೆ ದೊಡ್ಡ ಮಟ್ಟದ ಪಾದಯಾತ್ರೆಯನ್ನು ಮಾಡಲಾಗುತ್ತಿದೆ. ಇದರಿಂದ ಸಿಎಂ ಸಿದ್ದರಾಮಯ್ಯಗೆ ಸ್ವಲ್ಪ ಆತಂಕ ಶುರುವಾಗಿದೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. ಪೊಲೀಸ್ ಎಸ್ಕಾರ್ಟ್ ಬಿಟ್ಟು ಸಿಎಂ ಸಂಚಾರ:ರಾಜಕೀಯ ವಲಯದಲ್ಲಿ ಆಗಿರುವ ಬೆಳವಣಿಗೆಗಳಿಗೆ ತುಸು ಆತಂಕದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತವರು ಕ್ಷೇತ್ರ ಮೈಸುರಿಗೆ ತೆರಳಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆ ವೇಳೆಯಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ಎಸ್ಕಾರ್ಟ್ ಬಿಟ್ಟು ಒಬ್ಬಂಟಿಯಾಗಿ ಸಂಚಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಕಾರಿಗೆ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಅವರು ಚಾಲಕರಾಗಿ ಸಾಥ್ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಎಸ್ಕಾರ್ಟ್ ಬಿಟ್ಟು ಎಲ್ಲೆಂದರಲ್ಲಿ ಸಂಚಾರ ಮಾಡುವುದನ್ನು ನೋಡಿದ ಮೈಸೂರು ಪೊಲೀಸರು ಗಾಬರಿಯಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಗೆ ಹೋಗಿದ್ದಾರೆ, ಮುಂದೆ ಎಲ್ಲಿಗೆ ಹೋಗಲಿದ್ದಾರೆ ಎಂಬ ಮಾಹಿತಿಯಲ್ಲಿ ಕಲೆ ಹಾಕುವುದಕ್ಕೆ ಪರದಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಎಸ್ಕಾರ್ಟ್ ಪಡೆಯದಿದ್ದರೂ, ಅವರಿಗೆ ಭದ್ರತೆಯನ್ನು ಒದಗಿಸಲೇಬೇಕು. ಒಂದು ವೇಳೆ ಯಾವುದಾದರೂ ಅಹಿತಕರ ಘಟನೆ ನಡೆದರೆ, ಸ್ಥಳೀಯ ಪೊಲೀಸರು ಮಾತ್ರ ಗಂಭೀರ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಮಂಗಳವಾರ ಸಂಜೆ ಎಲ್ಲೆಡೆ ಅಲರ್ಟ್ ಆಗಿದ್ದರು. ಸಿದ್ದು ತಪ್ಪು ಮಾಡದಿದ್ರೆ ದೆಹಲಿ ನಾಯಕರ ಸಪೋರ್ಟ್ ಏಕೆ ಬೇಕು?. ಹಣ ಕೊಟ್ಟು ಅವರನ್ನು ಏಕೆ ಕರೆಸಿದ್ದೀರಿ?: ಅಶೋಕ್ ಮಾಜಿ ಶಾಸಕರು ಹಾಗೂ ತಮ್ಮ ಜೊತೆಗಾರರೊಂದಿಗೆ ಮೈಸೂರು ಸುತ್ತಾಡಿರುವ ಸಿಎಂ ಸಿದ್ದರಾಮಯ್ಯ ಅವರು ಒಂದು ಕಡೆ ಕಾರನ್ನು ನಿಲ್ಲಿಸಿ ಸಾರ್ವಜನಿಕರ ಸ್ಥಳದಲ್ಲಿಯೇ ಕಾಫಿ ಸೇವನೆ ಮಾಡಿದ್ದಾರೆ. ಆಗ ಮೈಸೂರಿನ ಜನತೆಯ ಮುಂದೆ ನಗು ನಗುತ್ತಾ ಮಾತನಾಡಿದ್ದಾರೆ. ಇದಾದ ನಂತರ ಸಿದ್ದರಾಮಯ್ಯ ತಾವು ನೂತನವಾಗಿ ಕಟ್ಟಿಸುತ್ತಿರುವ ಹೊಸ ಮನೆಯ ಕಾಮಾಗಾರಿ ವೀಕ್ಷಿಸಿದ್ದಾರೆ. ರಿಂಗ್ ರೋಡ್ ಮತ್ತು ನಗರದ ಒಳಭಾಗದ ರಸ್ತೆಗಳಲ್ಲಿ ಸಿಎಂ ಓಡಾಡಿದ್ದಾರೆ. ಇನ್ನು ಮೈಸೂರಿನ ಪ್ರಮುಖ ಸರ್ಕಲ್‌ಗಳಲ್ಲಿ ಸಿಎಂ ಸಿದ್ದರಾಮಯ್ಯ ಸಾಮಾನ್ಯರಂತೆ ಹೋಗುವುದನ್ನು ನೋಡಿ ಪೊಲೀಸರು ಗಾಬರಿಯಾಗಿದ್ದಾರೆ. ಆದರೆ, ಇದೆಲ್ಲದರ ಹಿಂದೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರ ನಡೆಯ ಟೆನ್ಷನ್ ಕಾಡುತ್ತಿದೆಯೇ ಎಂಬ ಪ್ರಶ್ನೆಗಳೂ ಉದ್ಭವವಾಗಿವೆ.