ಕಾಲೇಜೊಳಗೆ ನಮಾಜ್‌ಗೆ ಅವಕಾಶ ನೀಡದ್ದಕ್ಕೆ ಪ್ರಿನ್ಸಿಪಾಲ್‌ಗೆ ದಿಗ್ಬಂಧನ! ಚರ್ಚ್‌ ಆಡಳಿತದ ಕಾಲೇಜಲ್ಲಿ ನಮಾಜ್‌ ಮಾಡಲು ಮುಂದಾದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ತಡೆದಿದ್ದು ವಿವಾದಕ್ಕೀಡಾಗಿದೆ. ಕೊಚ್ಚಿ (ಜು.30):ಇಲ್ಲಿಗೆ ಸಮೀಪದ ಮುವಾಟ್ಟುಪುಳದಲ್ಲಿ ಚರ್ಚ್‌ ಆಡಳಿತದ ಕಾಲೇಜಲ್ಲಿ ನಮಾಜ್‌ ಮಾಡಲು ಮುಂದಾದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ತಡೆದಿದ್ದು ವಿವಾದಕ್ಕೀಡಾಗಿದೆ. ಅನುಮತಿ ನಿರಾಕರಣೆ ವಿರೋಧಿಸಿ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರೆ, ಇಂಥ ನಡೆಯನ್ನು ಬಿಜೆಪಿ ಹಾಗೂ ಕ್ರೈಸ್ತ ಸಂಘಟನೆಗಳು ವಿರೋಧಿಸಿವೆ. ಶುಕ್ರವಾರ ನಿರ್ಮಲಾ ಕಾಲೇಜಿನ ಕೊಠಡಿಯೊಳಗೆ ಕೆಲವು ವಿದ್ಯಾರ್ಥಿನಿಯರು ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದರು. ಆದರೆ ಅವರನ್ನು ಬೋಧಕೇತರ ಸಿಬ್ಬಂದಿ ತಡೆದಿದ್ದಾರೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ನಿರ್ಮಲಾ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದರು ಹಾಗೂ ಪ್ರಾಚಾರ್ಯರಿಗೆ ಘೇರಾವ್‌ ಹಾಕಿದರು. ಈ ಘಟನೆಯು ಬಿಜೆಪಿಯಿಂದ ಟೀಕೆಗೆ ಗುರಿಯಾಗಿದೆ. ಹಿಂದೂ ಮತ್ತು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವರು ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ನಡೆಗಳ ಹಿಂದೆ ಉಗ್ರರ ಕೈವಾಡವಿದೆ. ಅಂತಹವರಿಗೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಬೆಂಬಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ಮಾತನಾಡಿ, ‘ಯಾವುದಾದರೂ ಮುಸ್ಲಿಂ ಕಾಲೇಜುಗಳು ಹಿಂದೂಗಳು ಅಥವಾ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ಮಾಡಲು ಕೊಠಡಿ ನೀಡುತ್ತವೆಯೇ?’ ಎಂದು ಪ್ರಶ್ನಿಸಿದ್ದಾರೆ.