ಚಾರ್ಮಾಡಿ ಘಾಟ್ ಎಂಟ್ರಿಯಲ್ಲಿ ಪ್ರವಾಸಿಗರ ರಂಪಾಟ, ಎಣ್ಣೆ ಮತ್ತಿನಲ್ಲಿ ಪೊಲೀಸರ ಮುಂದೆಯೇ ಹೊಡೆದಾಟ! ಕಾಫಿನಾಡಿನಲ್ಲಿ ಪ್ರವಾಸಿಗರ ರಂಪಾಟ ಮುಂದುವರಿದೆ. ಕುಡಿದ ಅಮಲಿನಲ್ಲಿ ಯುವಕರು ಚಾರ್ಮಾಡಿ ಘಾಟ್ ಎಂಟ್ರಿಯಲ್ಲಿ ಕಿರಿಕ್ ಮಾಡಿದ್ದಾರೆ. ಚಿಕ್ಕಮಗಳೂರು (ಜು.13):ಕಾಫಿನಾಡಿನಲ್ಲಿ ಪ್ರವಾಸಿಗರ ರಂಪಾಟ ಮುಂದುವರಿದೆ. ಕುಡಿದ ಅಮಲಿನಲ್ಲಿ ಯುವಕರು ಚಾರ್ಮಾಡಿ ಘಾಟ್ ಎಂಟ್ರಿಯಲ್ಲಿ ಕಿರಿಕ್ ಮಾಡಿದ್ದಾರೆ. ಐ20 ಕಾರೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆಗ ಕಿರಿಕ್ ಆರಂಭವಾಗಿದೆ. ಮಂಗಳೂರು ಮೂಲದ ಯುವಕರು ಐ20 ಕಾರಿನಲ್ಲಿದ್ದರು. ಇವರು ಐ 20 ಕಾರ್ ನಲ್ಲಿ ಮಂಗಳೂರಿನಿಂದ ಮೂಡಿಗೆರೆಗೆ ಪ್ರವಾಸ ಕೈಗೊಂಡಿದ್ದರು. ಕುಡಿದ ಅಮಲಿನಲ್ಲಿ ಯುವಕರು ಅಲ್ಲೇ ನಿಂತಿದ್ದ ಹೊಂಡಾ ಸಿವಿಕ್ ಕಾರಿಗೆ ತಮ್ಮ ಐ20 ಕಾರಿನಿಂದ ಬಂದು ಗುದ್ದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದ ಸ್ಥಳೀಯರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರಿನಲ್ಲಿ ಒಟ್ಟು ಐವರು ಯುವಕರು ಇದ್ದರು. ಪೊಲೀಸರ ಸಮ್ಮುಖದಲ್ಲಿ ಹೊಡೆದಾಟ ಬಡಿದಾಟ ಮಾಡಿಕೊಂಡಿದ್ದು, ಸಮಾಜ ಸೇವಕ ಬಣಕಲ್ ಆರೀಫ್ ಮೇಲೂ ಯುವಕರು ಕೈ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಮೊರಾರ್ಜಿ ದೇಸಾಯಿ ಶಾಲೆ ಬಳಿ ಘಟನೆ ನಡೆದಿದೆ. ಚಾರ್ಮಾಡಿಯ ಅಪಾಯಕಾರಿ ತೊರೆಗೆ ಇಳಿದಿದ್ದವರ ಬಟ್ಟೆ ಹೊತ್ತೊಯ್ದ ಪೊಲೀಸ್ರು!ತುಂಬಿ ಹರಿಯುತ್ತಿದ್ದ ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಿದ್ದವರ ಬಟ್ಟೆಗಳನ್ನು ಪೊಲೀಸರು ಹೊತ್ತೊಯ್ದು ಬುದ್ಧಿ ಕಲಿಸಿದ ಘಟನೆ ಮಂಗಳವಾರ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಪೋಲಿಸರ ಈ ನಡೆ ಸಾರ್ವಜನಿಕರ ಪ್ರಶಂಸೆಗೊಳಗಾಗಿದೆ. ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಾ ಕಲ್ಲು ಬಂಡೆ ಏರುತ್ತಿದ್ದ ತಂಡವನ್ನು ಗಮನಿಸಿದ ಚಿಕ್ಕಮಗಳೂರು ವಿಭಾಗದ ಪೊಲೀಸ್ ಪ್ಯಾಟ್ರೋಲ್‌ ಸಿಬ್ಬಂದಿ ಯುವಕರ ಬಟ್ಟೆಗಳನ್ನು ಹೊತ್ತೊಯ್ದು ತಮ್ಮ ವಾಹನದಲ್ಲಿ ಇರಿಸಿ ತಂಡವನ್ನು ಪೇಚಿಗೆ ಸಿಲುಕಿಸಿದರು. ಈ ವೇಳೆ ಯುವಕರು ಪೊಲೀಸರ ಜತೆ ವಾಗ್ವಾದ ನಡೆಸಿದ್ದು, ಇದಕ್ಕೆ ಬಗ್ಗದ ಪೊಲೀಸರು ಯುವಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಯುವಕರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಬಟ್ಟೆಗಳನ್ನು ಕೊಡುವಂತೆ ಅಂಗಲಾಚಿದರು. ಪೊಲೀಸರು ಸಾಕಷ್ಟು ಬುದ್ಧಿವಾದ ಮತ್ತು ಅಪಾಯದ ಕುರಿತು ವಿವರಿಸಿ ಎಚ್ಚರಿಕೆ ನೀಡಿ ನಂತರ ಬಟ್ಟೆಗಳನ್ನು ಹಿಂತಿರುಗಿಸಿದರು.