ಬಿಜೆಪಿ ಜೊತೆಗೆ ಭಿನ್ನಾಭಿಪ್ರಾಯ ನಿರಾಕರಿಸಿದ ಆರೆಸ್ಸೆಸ್‌! ಬಿಜೆಪಿ ಜೊತೆಗೆ ಆರೆಸ್ಸೆಸ್‌ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೋಹನ್‌ ಭಾಗ್ವತ್‌ ಅವರು ನೀಡಿದ ಹೇಳಿಕೆಯನ್ನು ಪ್ರತಿಪಕ್ಷಗಳು ತಮಗೆ ಬೇಕಾದಂತೆ ತಿರುಚಿವೆ ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ. ನಾಗಪುರ (ಜೂ.15): ನಿಜವಾದ ಸೇವಕನಿಗೆ ಯಾವತ್ತೂ ಸೊಕ್ಕು ಇರಬಾರದು ಎಂದು ಆರೆಸ್ಸೆಸ್‌ ಸರಸಂಘಚಾಲಕ್‌ ಮೋಹನ್‌ ಭಾಗ್ವತ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲಿಯೇ ಆರೆಸ್ಸೆಸ್‌, ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯ ವದಂತಿಗಳನ್ನು ನಿರಾಕರಿಸಿದೆ. ಎನ್‌ಡಿಎ ಸರ್ಕಾರ ರಚನೆ ಮಾಡಿದ ಬೆನ್ನಲ್ಲಿಯೇ ಮೋಹನ್‌ ಭಾಗ್ವತ್‌ ಅವರು ಈ ಹೇಳಿಕೆ ನೀಡಿದ್ದರಿಂದ ಆರೆಸ್ಸೆಸ್‌ ಹಾಗೂ ಬಿಜೆಪಿ ನಡುವೆ ವೈಮನಸ್ಯ ತಲೆದೋರಿದೆ ಎನ್ನುವ ಅರ್ಥದ ಮಾತು ಕೇಳಿ ಬಂದಿದ್ದವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾದ ಬಳಿಕ ತನ್ನ ಸೈದ್ದಾಂತಿಕ ಮಾರ್ಗದರ್ಶಕ ಆರೆಸ್ಸೆಸ್‌ನಿಂದ ಟೀಕೆಯನ್ನು ಎದುರಿಸಿತ್ತು. ಚುನಾವಣೆ ಬಳಿಕ ಮೋಹನ್‌ ಭಾಗ್ವತ್‌ ಅವರು ನೀಡಿದ ಹೇಳಿಕೆಯಲ್ಲಿ ನಿಜವಾದ ಸೇವಕ ಎಂದಿಗೂ ಸೊಕ್ಕಿನವನಾಗಿರೋದಿಲ್ಲ ಎಂದಿದ್ದರು. ಆದರೆ, ಬಿಜೆಪಿಯ ಜೊತೆಗೆ ಭಿನ್ನಾಭಿಪ್ರಾಯ ಇದೆ ಎನ್ನುವ ಮಾತನ್ನು ಆರೆಸ್ಸೆಸ್‌ ಶುಕ್ರವಾರ ನಿರಾಕರಿಸಿದೆ.ಭಾಗವತ್ ಅವರ ಹೇಳಿಕೆಗಳು ಕೇಸರಿ ಪಕ್ಷದ ನಾಯಕತ್ವ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡಿವೆ ಎಂದು ಪ್ರತಿಪಕ್ಷ ನಾಯಕರು ಸೇರಿದಂತೆ ಒಂದು ವರ್ಗದ ಜನರ ಪ್ರತಿಪಾದನೆಯ ನಡುವೆ ಸಂಘ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ಬಿಜೆಪಿ ನಡುವೆ "ಯಾವುದೇ ಬಿರುಕು ಇಲ್ಲ" ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಅಂತಹ ಕಾಮೆಂಟ್‌ಗಳು ಊಹಾಪೋಹ ಎಂದು ಹೇಳಿದೆ.ಸೋಮವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಅವರು, ನಿಜವಾದ 'ಸೇವಕ' ಘನತೆಯನ್ನು ಕಾಪಾಡಿಕೊಳ್ಳುತ್ತಾನೆ. ಕೆಲಸ ಮಾಡುವಾಗ ಅವರಲ್ಲಿ ಒಂದು ಶಿಸ್ತು ಇದ್ದಿರುತ್ತದೆ. ‘ನಾನೇ ಈ ಕೆಲಸ ಮಾಡಿದೆ’ ಎನ್ನುವ ಅಹಂಕಾರವೂ ಅವನಿಗಿಲ್ಲ. ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ 'ಸೇವಕ' ಎಂದು ಕರೆಯಬಹುದು ಎಂದಿದ್ದರು. 2014 ಹಾಗೂ 2019ರ ಲೋಕಸಭಾ ಚುನಾವಣೆಯ ಬಳಿಕ ಆರೆಸ್ಸೆಸ್‌ನ ಮೋಹನ್‌ ಭಾಗ್ವತ್‌ ಅವರು ಹೇಳಿದ ಮಾತಿಗೂ ಈ ಚುನಾವಣೆಯಲ್ಲಿ ಬಳಿಕ ಹೇಳಿದ ಮಾತಿಗೂ ತುಂಬಾ ಹೆಚ್ಚಿನ ವ್ಯತ್ಯಾಸಗಳಿಲ್ಲ. ಯಾವುದೇ ಭಾಷಣವು ರಾಷ್ಟ್ರೀಯ ಚುನಾವಣೆಗಳಂತೆ ಪ್ರಮುಖವಾದ ಘಟನೆಯನ್ನು ಉಲ್ಲೇಖಿಸಲು ಬದ್ಧವಾಗಿದೆ ಎಂದು ಹೇಳಿದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಗೊಂದಲವನ್ನು ಸೃಷ್ಟಿಸಲು ಹೇಳಿಕೆಯನ್ನು ತಿರುಚಲಾಗಿದೆ. ಅವರ 'ಅಹಂಕಾರ' ಹೇಳಿಕೆಯನ್ನು ಎಂದಿಗೂ ಪ್ರಧಾನಿ ನರೇಂದ್ರ ಮೋದಿ ಅಥವಾ ಯಾವುದೇ ಬಿಜೆಪಿ ನಾಯಕರನ್ನು ಉದ್ದೇಶಿಸಿಲ್ಲ" ಎಂದು ಆರೆಸ್ಸೆಸ್‌ ಮೂಲಗಳು ತಿಳಿಸಿವೆ. ಆರೆಸ್ಸೆಸ್ ಮೂಲಗಳು ಅದರ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಅವರ ಚುನಾವಣಾ ಕಾರ್ಯಕ್ಷಮತೆಯ ಬಗ್ಗೆ ಬಿಜೆಪಿಯನ್ನು ಟೀಕೆ ಮಾಡಿದ್ದು ಸಂಘಕ್ಕೆ ಸಂಬಂಧಿಸಿಲ್ಲ ಎಂದಿದೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಸಂಘದ ಅಧಿಕೃತ ನಿಲುವನ್ನು ಇದು ಪ್ರತಿಬಿಂಬಿಸುವುದಿಲ್ಲ ಎಂದು ಕಾರ್ಯಕಾರಿ ಸದಸ್ಯರೊಬ್ಬರು ಹೇಳಿದ್ದಾರೆ. ಮಂಗಳವಾರ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇಂದ್ರೇಶ್‌ ಕುಮಾರ್, ಭಗವಾನ್‌ ರಾಮನ ಭಕ್ತಿ ಮಾಡಿದ ಪಕ್ಷ ಬಳಿಕ ಹಂತ ಹಂತವಾಗಿ ಅಹಂಕಾರ ತೋರಿದ್ದರಿಂದ 241ಕ್ಕೆ ನಿಂತುಕೊಂಡಿತು. ಹಾಗಿದ್ದರೂ ಇದು ದೊಡ್ಡ ಪಕ್ಷವಾಗಿ ಉಳಿದುಕೊಂಡಿತು. ಇನ್ನು ಭಗವಾನ್‌ ರಾಮನಲ್ಲಿ ಯಾವುದೇ ಭಕ್ತಿ ಇಲ್ಲದ ಪಕ್ಷಗಳು ಒಟ್ಟಾಗಿ ಬಂದರೂ ಅವುಗಳನ್ನು 234ಕ್ಕೆ ನಿಲ್ಲಿಸಲಾಯಿತು ಎನ್ನುವ ಮೂಲಕ ಇಂಡಿಯಾ ಒಕ್ಕೂಟಕ್ಕೂ ಟಾಂಗ್‌ ನೀಡಿದ್ದರು. ದುರಹಂಕಾರಿಗಳನ್ನು ಭಗವಾನ್‌ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿಗೆ ಟಾಂಗ್‌ ಕೊಟ್ಟ ಆರೆಸ್ಸೆಸ್‌ ನಾಯಕ! ತಮ್ಮ ಹೇಳಿಕೆಯು ವಿವಾದ ಸೃಷ್ಟಿಸುತ್ತಿದ್ದಂತೆ ಇಂದ್ರೇಶ್‌ ಕುಮಾರ್‌ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯ ಚುನಾವಣಾ ನಿರ್ವಹಣೆ ಹಾಗೂ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿದ್ದಕ್ಕೆ ನಾನು ಸೇರಿದಂತೆ ಇಡೀ ದೇಶವೂ ಸಂತೋಷದಿಂದಿದೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಲಹೆಗೆ ಕಿವಿಗೊಡಿ: ಪ್ರಧಾನಿ ಮೋದಿಗೆ ವಿಪಕ್ಷ ಆಗ್ರಹ