ಎಕ್ಸಿಟ್‌ ಪೋಲ್‌ ಲೆಕ್ಕಾಚಾರ ಉಲ್ಟಾ ಮಾಡಿದ ಉತ್ತರ ಪ್ರದೇಶ, ಇಂಡಿ-ಎನ್‌ಡಿಎ ನಡುವೆ ಥ್ರಿಲ್ಲಿಂಗ್‌ ಫೈಟ್‌! ಎಲ್ಲಾ ಎಕ್ಸಿಟ್‌ ಪೋಲ್‌ಗಳ ಲೆಕ್ಕಾಚಾರ ಉಲ್ಟಾ ಮಾಡಿರುವ ಉತ್ತರ ಪ್ರದೇಶದಲ್ಲಿ ಇಂಡಿ ಒಕ್ಕೂಟ ಹಾಗೂ ಎನ್‌ಡಿಎ ನಡುವೆ ಥ್ರಿಲ್ಲಿಂಗ್‌ ಫೈಟ್‌ ನಡೆಯುತ್ತಿದೆ. ಕಾಂಗ್ರೆಸ್‌-ಸಮಾಜವಾದಿ ಮೈತ್ರಿ ಪಶ್ಚಿಮ ಉತ್ತರ ಪ್ರದೇಶದಲ್ಲಿ 29 ಸೀಟ್‌ಗಳ ಮುನ್ನಡೆ ಕಂಡುಕೊಂಡಿದೆ. ನವದೆಹಲಿ (ಜೂ.4):ದೆಹಲಿ ಗದ್ದುಗೆಯ ರಾಜಮಾರ್ಗ ಉತ್ತರ ಪ್ರದೇಶದಿಂದಲೇ ಹಾದು ಹೋಗುತ್ತದೆ ಎನ್ನುವುದು ಭಾರತದ ರಾಜಕೀಯದಲ್ಲಿ ಅತ್ಯಂತ ಫೇಮಸ್‌ ಮಾತು. ಅದರಂತೆ ಈ ಬಾರಿ ಎಲ್ಲಾ ಎಕ್ಸಿಟ್‌ ಪೋಲ್‌ಗಳ ಲೆಕ್ಕಾಚಾರವನ್ನು ಉತ್ತರಪ್ರದೇಶ ರಾಜ್ಯ ಉಲ್ಟಾ ಮಾಡಿದೆ. ರಾಮ ಮಂದಿರ ವಿಚಾರದಿಂದ ದೊಡ್ಡ ಮಟ್ಟದ ಗೆಲುವಿನ ಅಲೆ ನಿರೀಕ್ಷೆ ಮಾಡಿದ್ದ ಬಿಜೆಪಿಗೆ ಅತಿದೊಡ್ಡ ಶಾಕ್‌ ಎದುರಾಗಿದೆ. ಪ್ರಸ್ತುತ ಮಾಹಿತಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮುನ್ನಡೆಗಾಗಿ ಬಿಜೆಪಿ ಹಾಗೂ ಇಂಡಿ ಒಕ್ಕೂಟದ ನಡುವೆ ಥ್ರಿಲ್ಲಿಂಗ್‌ ಫೈಟ್‌ ನಡೆಯುತ್ತಿದೆ. ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಇಂಡಿಯಾ ಬ್ಲಾಕ್‌ ಪಾಲಿಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ತರ ಪ್ರದೇಶದಲ್ಲಿ ಇಂಡಿ ಒಕ್ಕೂಟ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಆರಂಭಿಕ ಮುನ್ನಡೆಗಳು ತೋರಿಸುತ್ತವೆ. ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ, ಸಮಾಜವಾದಿ ಪಕ್ಷ-ಕಾಂಗ್ರೆಸ್ ಒಟ್ಟು 41 ರಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ. ಆರಂಭಿಕ ಪ್ರವೃತ್ತಿಯು ಮುಸ್ಲಿಂ-ಯಾದವ್ ಮತ್ತು ಮತಗಳ ಕ್ರೋಢೀಕರಣದ ಪರಿಣಾಮ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.ಮತಗಳ ಕ್ರೋಢೀಕರಣ ಹೊರತುಪಡಿಸಿದೆ, ಉದ್ಯೋಗಗಳ ಮೇಲಿನ ರಜಪೂತ ಸಮುದಾಯ ಮತ್ತು ಯುವಕರ ಕೋಪ ಮತ್ತು ಅಗ್ನಿವೀರ್ ಯೋಜನೆಯ ಮೇಲೆ ಇರುವ ಆಕ್ರೋಶ ಬಿಜೆಪಿಗೆ ಹಿನ್ನಡೆಯಾಗುವ ಸಾರ್ಧಯತೆ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಇಲ್ಲಿ ಐದು ಸ್ಥಾನಗಳಲ್ಲಿ ಗೆಲುವು ಕಂಡಿದ್ದರೆ, ಕಾಂಗ್ರೆಸ್‌ ಕೇವಲ 1 ಸ್ಥಾನದಲ್ಲಿ ಜಯಿಸಿತ್ತು.ದೇಶದ ಸಂಸತ್ತಿಗೆ ಗರಿಷ್ಠ ಪ್ರಮಾಣದ ಸಂಸದರನ್ನು ಕಳಿಸುವ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ಕಾರಣಕ್ಕಾಗಿ ದೆಹಲಿ ಗದ್ದುಗೆಯ ರಾಜಮಾರ್ಗ ಉತ್ತರ ಪ್ರದೇಶದ ಮೂಲಕವೇ ಹಾದು ಹೋಗುತ್ತದೆ ಎನ್ನಲಾಗುತ್ತಿದೆ. ಪ್ರಸ್ತುತ ಬಂದ ಮಾಹಿತಿಯ ಪ್ರಕಾರ ಇಂಡಿ ಒಕ್ಕೂಟ 41 ಸೀಟ್‌ಗಳಲ್ಲಿ ಗೆಲುವು ಸಾಧಿಸುವ ಹಾದಿಯಲ್ಲಿದ್ದರೆ, ಬಿಜೆಪಿ 39 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಆದರೆ, ಮುನ್ನಡೆಯ ಅಂತರ ಅಲ್ಪವಾಗಿರುವ ಕಾರಣ ಸೋಲು ಗೆಲುವು ಯಾರ ಕಡೆಗೆ ಬೇಕಾದರೂ ಆಗಬಹುದು ಎನ್ನಲಾಗಿದೆ.29 ಪಶ್ಚಿಮ ಯುಪಿ ಸ್ಥಾನಗಳಲ್ಲಿ, ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ 2024 ರ ಲೋಕಸಭಾ ಚುನಾವಣಾ ಫಲಿತಾಂಶಗಳ ಆರಂಭಿಕ ಮುನ್ನಡೆಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. 2019 ರಲ್ಲಿ ಎನ್‌ಡಿಎ ಈ ಪ್ರದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ಇನ್ನಷ್ಟು ಉತ್ತಮ ಫಲಿತಾಂಶಗಳಿಗಾಗಿ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಂತ್ ಚೌಧರಿಯವರ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನೊಂದಿಗೆ ಮೈತ್ರಿ ಮಾಡಿಕೊಂಡಿತು. : ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ ಆರಂಭಿಕ ಟ್ರೆಂಡ್‌ಗಳಂತೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಪ್ರಚಾರ ಸಭೆಗಳು ಮತಗಳನ್ನು ಕ್ರೋಢೀಕರಿಸುವಲ್ಲಿ ಕೆಲಸ ಮಾಡಿದೆ. ರಾಜ್ಯದ 80 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಎನ್‌ಡಿಎ ಬುಟ್ಟಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಇದು ಹಿನ್ನಡೆಯಾಗಬಹುದು. : ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು