ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭಾರತ-ಪಾಕಿಸ್ತಾನ ಗಡಿ ಓಪನ್‌ ಮಾಡ್ತೇವೆ ಎಂದ ಪಂಜಾಬ್‌ ಮಾಜಿ ಸಿಎಂ! ಪಂಜಾಬ್‌ ಮಾಜಿ ಸಿಎಂ ಹಾಗೂ ಜಲಂಧರ್‌ನ ಕಾಂಗ್ರೆಸ್‌ ಅಭ್ಯರ್ಥಿ ಚರಣ್‌ಜಿತ್‌ ಸಿಂಗ್‌ ಚನ್ನಿ ವಿವಾದಿತ ಮಾತಿನಿಂದಾಗಿ ಸುದ್ದಿಯಾಗಿದ್ದಾರೆ. ಹಾಗೇನಾದರೂ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಭಾರತ-ಪಾಕಿಸ್ತಾನ ಗಡಿಯನ್ನು ಓಪನ್‌ ಮಾಡಲಿದ್ದೇವೆ ಎಂದಿದ್ದಾರೆ. ನವದೆಹಲಿ (ಮೇ.26):ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಜಲಂಧರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ವಾಘಾ ಗಡಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ವಾಘಾ ಗಡಿಯನ್ನು ತೆರೆಯುವುದಾಗಿ ಮಾಜಿ ಸಿಎಂ ಹೇಳಿದ್ದಾರೆ. ಇದು ಜಲಂಧರ್‌ನಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಇದು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ. ಜಲಂಧರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಮಾತನಾಡಿದ್ದು, "ನಾವು ಜಲಂಧರ್ ಅನ್ನು ವೈದ್ಯಕೀಯ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತೇವೆ ಮತ್ತು ವಾಘಾ ಗಡಿಯನ್ನು ತೆರೆಯುತ್ತೇವೆ ಇದರಿಂದ ಪಾಕಿಸ್ತಾನದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರಬಹುದು" ಎಂದು ಹೇಳಿದ್ದಾರೆ. ವಾಘಾ ಗಡಿಯನ್ನು ತೆರೆಯುವುದರಿಂದ ಪಾಕಿಸ್ತಾನದ ಜನರು ಚಿಕಿತ್ಸೆಗಾಗಿ ಭಾರತಕ್ಕೆ ತಲುಪಲು ಸಾಧ್ಯವಾಗಲಿದೆ ಮತ್ತು ಇದು ಪಂಜಾಬ್‌ನಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಚನ್ನಿ ಪತ್ರಿಕಾಗೋಷ್ಠಿಯಲ್ಲಿ ವಾದಿಸಿದರು. ಇದರೊಂದಿಗೆ ಪ್ರಧಾನಿ ಮೋದಿಯವರ ಸಮಾವೇಶದ ಕುರಿತಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ ಅವರು, ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ಸಂಪೂರ್ಣ ಫ್ಲಾಪ್ ಆಗಿದೆ ಎಂದಿದ್ದಾರೆ.ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ ಚರಣ್‌ಜಿತ್‌ ಸಿಂಗ್‌ ಚನ್ನಿ, ಪ್ರಧಾನಿ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಹೇಳಿದರು. ಪ್ರಧಾನಿಯವರು ಇಲ್ಲಿನ ಜನರಿಗೆ ನಿರಾಸೆ ಮೂಡಿಸಿದ್ದಾರೆ. ಸಮಾವೇಶಕ್ಕೆ 8 ಜಿಲ್ಲೆಯ ಜನರನ್ನು ಕರೆತರುವ ಪ್ರಯತ್ನ ಮಾಡಲಾಗಿತ್ತು. ಆದರೆ, ಇಡೀ ಸಮಾವೇಶ ಪೂರ್ತಿ ಫ್ಲಾಪ್‌ ಆಗಿದೆ. ಮೋದಿ ಏನಾದ್ರೂ ದೊಡ್ಡ ಘೋಷಣೆ ಮಾಡ್ತಾರೆ ಅಂತಾ ನಮ್ಮ ಜನ ನಿರೀಕ್ಷೆಯಲ್ಲಿದ್ದರು. ಆದರೆ, ಮೋದಿ ಏನನ್ನೂ ಘೋಷಣೆ ಮಾಡಿಲ್ಲ. ಜಲಂಧರ್‌ನಲ್ಲಿ ಏಮ್ಸ್‌ ಆರಂಭಿಸೋದಾಗಿ ಹೇಳಿದ್ರು, ಆದ್ರೆ ಅದನ್ನೂ ಮಾಡಿಲ್ಲ. ಇಲ್ಲಿನ ಮುಚ್ಚಿದ ಕಾರ್ಖಾನೆಗಳಿಗೆ ಪ್ಯಾಕೇಜ್‌ ಘೋಷಣೆಯಾದ್ರೂ ಮಾಡ್ತಾರಾ ಅಂದುಕೊಂಡಿದ್ರು ಅದೂ ಕೂಡ ಆಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದರು. ಮೇ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದರು.ಜಲಂಧರ್‌ನಲ್ಲಿ ನಡೆದ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಂಜಾಬ್‌ ಮಾಜಿ ಸಿಎಂ ಚನ್ನಿ ಕೂಡ ಬಿಜೆಪಿಗೆ? ಜಲಂಧರ್‌ ಉಪಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ ಪಂಜಾಬ್‌ನ 13 ಸ್ಥಾನಗಳಿಗೆ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಒಟ್ಟು 328 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 13 ಸ್ಥಾನಗಳಲ್ಲಿ ಗುರುದಾಸ್‌ಪುರ, ಅಮೃತಸರ, ಖದೂರ್ ಸಾಹಿಬ್, ಜಲಂಧರ್ ಲೋಕಸಭಾ ಕ್ಷೇತ್ರಗಳು ಸೇರಿವೆ. ಇದರೊಂದಿಗೆ ಹೋಶಿಯಾರ್‌ಪುರ, ಆನಂದಪುರ ಸಾಹಿಬ್, ಲೂಧಿಯಾನ, ಫತೇಘರ್ ಸಾಹಿಬ್, ಫರೀದ್‌ಕೋಟ್, ಫಿರೋಜ್‌ಪುರ, ಪಟಿಯಾಲ, ಬಟಿಂಡಾ ಮತ್ತು ಸಂಗ್ರೂರ್ ಕ್ಷೇತ್ರಗಳಲ್ಲಿಯೂ ಮತದಾನ ನಡೆಯಲಿದೆ. ಸಿಎಂ ಸ್ಥಾನಕ್ಕೆ ಚನ್ನಿ ರಾಜೀನಾಮೆ: ಪಂಜಾಬ್ ಬದಲಾವಣೆಗೆ ಮತ ನೀಡಿದೆ ಎಂದು ಅಚ್ಚರಿಯ ಹೇಳಿಕೆ!