ನಿಮ್ಮ ಮಗುವಿನ ಭವಿಷ್ಯಕ್ಕಾಗಿ ನಾಳೆ ಕೇಂದ್ರದಿಂದ ಹೊಸ ಯೋಜನೆಗೆ ಚಾಲನೆ; ಏನಿದು ಎನ್‌ಪಿಎಸ್ ವಾತ್ಸಲ್ಯ ಸ್ಕೀಂ? ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಕೇಂದ್ರ ಹೊಸ ಯೋಜನೆಗೆ ನಾಳೆ ಚಾಲನೆ ನೀಡಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್. ಏನಿದು ಎನ್‌ಪಿಎಸ್ ಯೋಜನೆ, ಯಾರು ಅರ್ಹರು, ಫಲಾನುಭವಿಯಾಗುವುದು ಹೇಗೆ ತಿಳಿಯಿರಿ : ಪಿಂಚಣಿ ಯೋಜನೆಗಳು ಕೇವಲ ವಯಸ್ಕರಿಗೆ ಮಾತ್ರ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ವಯಸ್ಕರಿಗೆ ಮಾತ್ರವಲ್ಲ ಮಕ್ಕಳಿಗೂ ಲಭ್ಯವಿದೆ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಕೆಲವು ಖಾಸಗಿ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಇಂತಹ ಯೋಜನೆಗಳನ್ನು ಪ್ರಾರಂಭಿಸಿವೆ. ಇದೀಗ ಅವರಿಗೆ ಪೈಪೋಟಿ ನೀಡಲು ಕೇಂದ್ರ ಸರ್ಕಾರ ಸಹ ಎನ್‌ಪಿಎಸ್‌ನಲ್ಲಿ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಹೌದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಮಂಡಿಸಿ, ಎನ್‌ಪಿಎಸ್ ವಾತ್ಸಲ್ಯ ಯೋಜನೆಯನ್ನು ಪರಿಚಯಿಸುವುದಾಗಿ ಘೋಷಿಸಿದ್ದರು. ಇದೀಗ ಮಾತುಕೊಟ್ಟಂತೆ ಕಾರ್ಯಗತಗೊಳಿಸುವ ಮುಂದಾಗಿದ್ದಾರೆ. ಕೇಂದ್ರ ಹಣಕಾಸು ಸಚಿವರು ವಾತ್ಸಲ್ಯ ಯೋಜನೆಯನ್ನು ನಾಳೆಯೇ (18 ಸೆಪ್ಟೆಂಬರ್ 2024 ರಂದು) ಬುಧವಾರ ಪ್ರಾರಂಭಿಸಲಿದ್ದಾರೆ. ಅಪ್ರಾಪ್ತ ಮಕ್ಕಳ ಭವಿಷ್ಯ ಭದ್ರ, ನಾಳೆಯಿಂದ ಶುರುವಾಗಲಿದೆ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯೋಜನೆಯ ಫಲಾನುಭವಿಯಾಗಲು ಸಚಿವರು ನಾಳೆಯೇ ಆನ್‌ಲೈನ್ ವ್ಯವಸ್ಥೆಗೂ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಯೋಜನೆಯ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಲಿದ್ದಾರೆ. ಯೋಜನೆಯು ಅಪ್ರಾಪ್ತ (18 ವರ್ಷದೊಳಗಿನ) ಫಲಾನುಭವಿಗಳಿಗೆ ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ ಅಥವಾ ( ) ಅನ್ನು ಸಹ ನೀಡಲಿದ್ದಾರೆ. ನಾಳೆ ಬುಧವಾರ 75 ನಗರಗಳಲ್ಲಿ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಉದ್ಘಾಟನಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಪ್ರಮುಖ ಕಾರ್ಯಕ್ರಮ ನವದೆಹಲಿಯಲ್ಲಿ ನಡೆಯಲಿದೆ. ಇತರೆ ಪ್ರದೇಶಗಳ ಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಬಹುದಾಗಿದೆ.