ಜಮ್ಮು ಕಾಶ್ಮೀರ ಚುನಾವಣೆ: ಸಂಸತ್ ಮೇಲಿನ ದಾಳಿಕೋರ ಅಫ್ಜಲ್‌ ಗುರು ಸೋದರನಿಂದ ನಾಮಪತ್ರ ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆ ಗರಿಗೆದರಿದೆ. 22 ವರ್ಷಗಳ ಹಿಂದೆ ನಡೆದ ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರುವಿನ ಸೋದರ ಐಜಾಜ್ ಅಹ್ಮದ್ ಗುರು ( ) ಈಗ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸೋಪೊರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆ ಗರಿಗೆದರಿದೆ. 22 ವರ್ಷಗಳ ಹಿಂದೆ ನಡೆದ ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರುವಿನ ಸೋದರ ಐಜಾಜ್ ಅಹ್ಮದ್ ಗುರು ( ) ಈಗ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸೋಪೊರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ದೋಷಿಯಾಗಿ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ ಗುರುವಿನ ಸೋದರನಾಗಿರುವ ಇವರು ಇಂದು ಸ್ವತಂತ್ರ ಅಭ್ಯರ್ಥಿಯಾಗಿ ಸೋಪೋರ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಫ್ಜಲ್‌ ಗುರುವನ್ನು 11 ವರ್ಷಗಳ ಹಿಂದೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಐಜಾಜ್ ಗುರು ಅವರು ಜಮ್ಮು ಕಾಶ್ಮೀರದ ಪಶು ಸಂಗೋಪನಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದರು. ಆದರೆ 2014ರಲ್ಲಿ ಸ್ವಯಂ ನಿವೃತ್ತಿ ಪಡೆದ ಅವರು ಪ್ರಸ್ತುತ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಐಜಾಜ್, ತನ್ನ ಮಗನನ್ನು ಬಂಧಿಸಿರುವುದೇ ತಾನು ರಾಜಕೀಯ ಪ್ರವೇಶಿಸುವುದಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಐಜಾಜ್ ಗುರುವಿನ ಪುತ್ರ ಶೋಯೆಬ್ ಐಜಾಜ್ ಗುರುವನ್ನು 2023ರ ಡಿಸೆಂಬರ್‌ನಲ್ಲಿ ಜಮ್ಮು ಕಾಶ್ಮೀರದ ಬರಾಮುಲ್ಲಾ ಪೊಲೀಸರು ಡ್ರಗ್ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದರು. ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾನೂನು (ಪಿಐಟಿ-ಎನ್‌ಡಿಪಿಎಸ್ ಕಾಯ್ದೆ) ಅಡಿಯಲ್ಲಿ ಆತನನ್ನು ಬಂಧಿಸಲಾಗಿದ್ದು, ಪ್ರಸ್ತುತ ಆತನನ್ನು ಜಮ್ಮುವಿನ ಕೋಟ್‌-ಭಲ್ವಾಲ್ ಜೈಲಿನಲ್ಲಿ ಇಡಲಾಗಿದೆ. 2001 : ಸಂಸತ್ ದಾಳಿ ನಡೆದು 2 ದಶಕ: 20 ವರ್ಷದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಬದಲು! ಪ್ರಸ್ತುತ ಗುತ್ತಿಗೆದಾರರಾಗಿರುವ ಐಜಾಜ್ ಅವರು ತಮ್ಮ ಮಗನ ವಿರುದ್ಧದ ಪ್ರಕರಣವನ್ನು ಕಟ್ಟುಕತೆ ಎಂದು ಹೇಳಿದ್ದು, ಆತನನ್ನು ಸಂಶಯಾಸ್ಪದ ರೀತಿಯಲ್ಲಿ ಬಂಧಿಸಲಾಗಿದೆ. ಇದೇ ರೀತಿ ಅನುಮಾನಾಸ್ಪದ ಸ್ಥಿತಿಯಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಅನೇಕರ ಪರ ತಾನು ವಕಾಲತು ವಹಿಸುವುದಾಗಿ ಐಜಾಜ್ ಹೇಳಿದ್ದಾರೆ. ಸೋಪೋರ್ ಕ್ಷೇತ್ರವನ್ನು ಈ ಹಿಂದೆ ಗೆದ್ದು ಜನಪ್ರತಿನಿಧಿಗಳಾದ ನಾಯಕರೆಲ್ಲರೂ ನಿರ್ಲಕ್ಷಿಸಿದ್ದಾರೆ. ತಾವು ಗೆದ್ದು ಬಂದರೆ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಯುವಕರ ಪುನರ್ವಸತಿ ಮುಂತಾದ ದೀರ್ಘಕಾಲದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದು ತಮ್ಮ ಮೊದಲ ಆದ್ಯತೆ ಎಂದು ಐಜಾಜ್ ಹೇಳಿದ್ದಾರೆ. ನಾನು ನನ್ನ ಸೋದರನ ಹೆಸರಲ್ಲಿ ಎಂದಿಗೂ ವೋಟ್ ಕೇಳುವುದಿಲ್ಲ, ನನ್ನ ಸಿದ್ಧಾಂತವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಕಾಶ್ಮೀರದ ಜನ ವಿಶೇಷವಾಗಿ ಸೋಪೋರ್‌ನ ಜನ ಇಲ್ಲಿನ ರಾಜಕೀಯ ನಾಯಕರಿಂದ ನಿರಾಶೆಗೆ ಒಳಗಾಗಿದ್ದಾರೆ ಎಂದು ಐಜಾಜ್ ಹೇಳಿದ್ದಾರೆ. ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಪುತ್ರನಿಗೆ ಬೋರ್ಡ್ ಪರೀಕ್ಷೆಯಲ್ಲಿ ರ‍್ಯಾಂಕ್ ಐಜಾಜ್ ಸ್ಪರ್ಧೆ ಮಾಡುತ್ತಿರುವ ಈ ಸೋಪೋರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈ ಹಿಂದೆ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಾಜಿ ಅಬ್ದುಲ್ ರಶೀದ್ ದಾರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ, ಇರ್ಷಾದ್ ಕರ್ ಅವರು ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಯಾಗಿದ್ದಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.